Home News ವಿದ್ಯಾರ್ಥಿ ಸ್ನೇಹಿ ಪ್ರಶ್ನೆಪತ್ರಿಕೆ ರಚನೆಗೆ ಮನವಿಪತ್ರ ಸಲ್ಲಿಕೆ

ವಿದ್ಯಾರ್ಥಿ ಸ್ನೇಹಿ ಪ್ರಶ್ನೆಪತ್ರಿಕೆ ರಚನೆಗೆ ಮನವಿಪತ್ರ ಸಲ್ಲಿಕೆ

0
Sidlaghatta Teachers urge for Student Friendly Exam Question Paper

Sidlaghatta : SSLC ಪರೀಕ್ಷೆಯ ವಿಜ್ಞಾನ ಪ್ರಶ್ನೆಪತ್ರಿಕೆಯ ವಿನ್ಯಾಸ ಮತ್ತು ರಚನೆಯಲ್ಲಿ ವಿದ್ಯಾರ್ಥಿ ಸ್ನೇಹಿಯಾದ ಸೂಕ್ತ ಬದಲಾವಣೆಗಳನ್ನು ತರುವಂತೆ ಕೋರಿ ತಾಲ್ಲೂಕು ಪ್ರೌಢಶಾಲಾ ವಿಜ್ಞಾನ ಶಿಕ್ಷಕರ ವೇದಿಕೆಯ ವತಿಯಿಂದ ಕ್ಷೇತ್ರಶಿಕ್ಷಣಾಧಿಕಾರಿ ಸಿ.ಎ.ನರೇಂದ್ರಕುಮಾರ್ ಅವರಿಗೆ ಮನವಿಪತ್ರ ಸಲ್ಲಿಸಲಾಯಿತು.

ದೊಡ್ಡತೇಕಹಳ್ಳಿ ಸರ್ಕಾರಿ ಪೌಢಶಾಲೆಯ ವಿಜ್ಞಾನ ಶಿಕ್ಷಕ ಎಸ್.ಎ.ವಿಶ್ವನಾಥ್ ಮಾತನಾಡಿ, ಕಳೆದ ನಾಲ್ಕೈದು ವರ್ಷಗಳಿಂದ ಎಸ್‌.ಎಸ್‌.ಎಲ್‌.ಸಿ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳ ಮನೋವೈಜ್ಞಾನಿಕ ದೃಷ್ಟಿಕೋನದಿಂದ ವಿಜ್ಞಾನ ಪ್ರಶ್ನೆಪತ್ರಿಕೆಯು ಅತ್ಯಂತ ಕ್ಲಿಷ್ಟಕರ ಮತ್ತು ಗೊಂದಲಮಯವಾಗಿದ್ದು, ಗ್ರಾಮೀಣಭಾಗದ ವಿದ್ಯಾರ್ಥಿಗಳಲ್ಲದೇ ನಗರಪ್ರದೇಶದ ಮಕ್ಕಳೂ ಪ್ರಶ್ನೆಪತ್ರಿಕೆಯನ್ನು ಬಿಡಿಸಲು ಕಷ್ಟಕರವಾಗಿದೆ.

ರಾಜ್ಯಮಟ್ಟದಲ್ಲಿ ಅತಿ ಬುದ್ಧಿವಂತ ವಿದ್ಯಾರ್ಥಿಗಳೂ ಸಹ ನೂರಕ್ಕೆ ನೂರು ಅಂಕಗಳಿಸುವುದು ಅಸಾಧ್ಯವೆನಿಸಿದೆ.ಇದರಿಂದಾಗಿ ಮುಂದಿನ ಭವಿಷ್ಯದ ಉನ್ನತಶಿಕ್ಷಣ ಮಟ್ಟದಲ್ಲಿ ಯಾರೊಬ್ಬರೂ ವಿಜ್ಞಾನ ವಿಷಯವನ್ನು ಆಯ್ಕೆ ಮಾಡಿಕೊಳ್ಲಲು ಚಿಂತಿಸುವಂತಾಗಿದೆ ಎಂದರು.

ಕುಂದಲಗುರ್ಕಿ ಸರ್ಕಾರಿ ಪ್ರೌಢಶಾಲೆಯ ವಿಜ್ಞಾನ ಶಿಕ್ಷಕ ಪ್ರಶಾಂತಕುಮಾರ್ ಮಾತನಾಡಿ, ಪ್ರಶ್ನೆಪತ್ರಿಕೆಯು ವಿದ್ಯಾರ್ಥಿ ಸ್ನೇಹಿಯಾಗಿರಬೇಕಲ್ಲದೇ ಶಿಕ್ಷಕರ ಪ್ರತಿಷ್ಟೆಯಂತಾಗಬಾರದು.

ಗ್ರಾಮೀಣ ಮಕ್ಕಳ ಮನೋವೈಜ್ಞಾನಿಕ, ಸಾಮಾಜಿಕ, ಕೌಟುಂಬಿಕ ಶೈಕ್ಷಣಿಕ ಸ್ಥಿತಿಗತಿ ಮತ್ತಿತರ ಅಂಶಗಳನ್ನು ಗಮನದಲ್ಲಿರಿಸಿಕೊಂಡು ವಿಜ್ಞಾನ ಪ್ರಶ್ನೆಪತ್ರಿಕೆಯು ತಯಾರಾಗುವಂತೆ ವೈಜ್ಞಾಣಿಕ ಬದಲಾವಣೆಗಳನ್ನು ತರಬೇಕಾದ ಅಗತ್ಯವಿದೆ ಎಂದರು.

ಮನವಿಯ ಮುಖ್ಯಾಂಶಗಳು:

ಸಿ.ಬಿ.ಎಸ್‌.ಇ ನಿಯಮಾವಳಿಗಳಂತೆ ರೂಪಣಾತ್ಮಕ, ಆಂತರಿಕ ಮೌಲ್ಯಮಾಪನ ಅಂಕಗಳನ್ನು ಉತ್ತೀರ್ಣತೆಗೆ ಪರಿಗಣಿಸಬೇಕು.

PUC ಪರೀಕ್ಷೆಯಲ್ಲಿರುವಂತೆಯೇ ಪ್ರಶ್ನೆಗಳ ಸ್ವರೂಪವು ಮಕ್ಕಳ ಮನೋವೈಜ್ಞಾನಿಕ ಸಾಮರ್ಥ್ಯಕ್ಕನುಗುಣವಾಗಿದ್ದು ಮಕ್ಕಳಸ್ನೇಹಿಯಾಗಿರಬೇಕು.

ಕಠಿಣತೆಯ ಮಟ್ಟವು ಸರಾಸರಿ ಕಲಿಕಾಮಟ್ಟಕ್ಕಿಂತ ಕಡಿಮೆಯಿರುವವರಿಗೆ ಹೊರೆಯಾಗದಂತಿರಬೇಕು. ಪ್ರತಿ ಅಧ್ಯಾಯದ ನಂತರ ಅಧ್ಯಯನ ಮಾಡುವ, ಪಠ್ಯಪುಸ್ತಕದಲ್ಲಿನ ಅಭ್ಯಾಸಗಳಲ್ಲಿನ ಶೇ 50 ರಷ್ಟಾದರೂ ಪ್ರಶ್ನೆಗಳನ್ನು ಪ್ರಶ್ನೆಪತ್ರಿಕೆಯಲ್ಲಿ ಕೇಳುವ ಮೂಲಕ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸಬೇಕು.

ಹಿಂದಿನ ವರ್ಷದ ಪ್ರಶ್ನೆಪತ್ರಿಕೆಗಳಲ್ಲಿನ ಕನಿಷ್ಟ ಶೇ 30 ರಷ್ಟಾದರೂ ಪ್ರಶ್ನೆಗಳು ಪುನರಾವರ್ತನೆಯಾಗಬೇಕು. ವಿನಾಕಾರಣ ತಿರುಚಿ ವಿದ್ಯಾರ್ಥಿಗಳನ್ನು ಮಾನಸಿಕ ಉದ್ವೇಗಕ್ಕೆ ಒಳಗಾಗಿಸುವುದು ಬೇಡ.

ಕೌಶಲ ನಿರ್ದಿಷ್ಟದಡಿ ಬರುವ ಕೆಲವಾದರೂ ಚಿತ್ರಬರೆಯುವ ಪ್ರಶ್ನೆಗಳು ಭಾಗಗಳನ್ನು ಗುರ್ತಿಸುವ ಪ್ರಶ್ನೆಗಳಾಗಿ ಬದಲಾಗಬೇಕು. ಬಹು ಆಯ್ಕೆ ಪ್ರಶ್ನೆಗಳ ಸಂಖ್ಯೆಯನ್ನು ಕನಿಷ್ಟ 15 ಕ್ಕೆ ಏರಿಸಬೇಕು.

ವಿದ್ಯಾರ್ಥಿಗಳ ಹಿತವನ್ನು ಗಮನದಲ್ಲಿರಿಸಿಕೊಂಡು ಅಧ್ಯಾಯವಾರು ಪ್ರಶ್ನೆಕೋಠಿ, ಮಾದರಿ ಪ್ರಶ್ನೆಗಳನ್ನು ವೆಬ್‌ಸೈಟ್‌ ನಲ್ಲಿ ಪ್ರಕಟಿಸಿದರೆ ವಿದ್ಯಾರ್ಥಿಗಳು, ಪೋಷಕರಲ್ಲಿ ಆತ್ಮವಿಶ್ವಾಸ ತುಂಬಲು ಪೂರಕವಾಗುತ್ತದೆ ಎಂಬುದು ಮನವಿಪತ್ರದಲ್ಲಿ ಸೇರಿವೆ.

ಮನವಿಪತ್ರ ಸ್ವೀಕರಿಸಿದ ನಂತರ ಕ್ಷೇತ್ರಶಿಕ್ಷಣಾಧಿಕಾರಿ ಸಿ.ಎ.ನರೇಂದ್ರಕುಮಾರ್ ಮಾತನಾಡಿ, ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವನೆಯನ್ನು ಸೃಜಿಸಲು ಮತ್ತು ಗಟ್ಟಿಗೊಳಿಸಲು ಅನ್ವಯಿಕ ಜ್ಞಾನದ ಅಗತ್ಯ ಹೆಚ್ಚಿದೆ.

ಹಾಗಾಗಿ 6 ನೇ ತರಗತಿಯಿಂದಲೇ ವಿಜ್ಞಾನವನ್ನು ಮೂಲವಿಜ್ಞಾನ ಮತ್ತು ಅನ್ವಯಿಕ ವಿಷಯವನ್ನಾಗಿ ಬೋಧಿಸಬೇಕಾದ ಅನಿವಾರ್ಯತೆಯಿದ್ದು, ವಿಜ್ಞಾನ ವಿಷಯದಲ್ಲಿ ಎಸ್‌.ಎಸ್‌.ಎಲ್‌.ಸಿ ಪರೀಕ್ಷಾ ಫಲಿತಾಂಶವನ್ನು ಉತ್ತಮಪಡಿಸುವಲ್ಲಿ ರಾಜ್ಯಮಟ್ಟದಲ್ಲಿ ಚರ್ಚೆ ನಡೆಯುತ್ತಿವೆ. ವಿದ್ಯಾರ್ಥಿಸ್ನೇಹಿ ಕ್ರಮಗಳು ನಿರೀಕ್ಷಿತ ಎಂದರು.

ಮನವಿ ಪತ್ರ ಸಲ್ಲಿಸಿದ ಸಂದರ್ಭದಲ್ಲಿ ತಾಲ್ಲೂಕು ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಎಲ್.ವಿ.ವೆಂಕಟರೆಡ್ಡಿ, ಪ್ರಧಾನಕಾರ್ಯದರ್ಶಿ ಎಚ್.ಎಸ್.ರುದ್ರೇಶಮೂರ್ತಿ, ಉಪಾಧ್ಯಕ್ಷ ಎಂ.ಕೆ.ಸಿದ್ಧರಾಜು, ಸಹಕಾರ್ಯದರ್ಶಿ ಎಂ.ಶಿವಕುಮಾರ್, ನಡಿಪಿನಾಯಕನಹಳ್ಳಿ ನವೋದಯಶಾಲೆಯ ದ್ಯಾವಪ್ಪ, ಭಕ್ತರಹಳ್ಳಿ ಬಿಎಂವಿ ಶಾಲೆಯ ವೆಂಕಟಮೂರ್ತಿ, ಬಿಆರ್‌ಪಿ ಲಕ್ಷ್ಮಿನಾರಾಯಣ್, ಹಾಜರಿದ್ದರು.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.

error: Content is protected !!
Exit mobile version