Sidlaghatta : ಶಿಡ್ಲಘಟ್ಟ : ತಾಲ್ಲೂಕು ಪ್ರಾಥಮಿಕ ಕೃಷಿ ಮತ್ತು ಗ್ರಾಮೀಣ ಅಭಿವೃದ್ದಿ ಬ್ಯಾಂಕ್(ಪಿಕಾರ್ಡ್ ಬ್ಯಾಂಕ್)ನ ಆಡಳಿತ ಮಂಡಳಿಗೆ ಐದು ವರ್ಷಗಳ ಅವಧಿಗೆ ನಿರ್ದೇಶಕರ ಸ್ಥಾನಗಳಿಗೆ ಭಾನುವಾರ ನಡೆದ ಚುನಾವಣೆಯಲ್ಲಿ 9 ಮಂದಿ ಜೆಡಿಎಸ್ ಬೆಂಬಲಿತ ನಿರ್ದೇಶಕರು ಗೆಲುವು ಸಾಧಿಸಿದ್ದಾರೆ. 5 ಸ್ಥಾನಗಳಿಗೆ ಕಾಂಗ್ರೆಸ್ ತೃಪ್ತಿಪಡುವಂತಾಗಿದೆ.
ಆನೂರು ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರದಿಂದ ಅವಿರೋಧ ಆಯ್ಕೆಯಾಗಿದ್ದ ಬಂಕ್ ಮುನಿಯಪ್ಪ ಸೇರಿದಂತೆ 9 ಕ್ಷೇತ್ರಗಳಲ್ಲಿ ಜೆಡಿಎಸ್ ಬೆಂಬಲಿತರು ವಿಜಯ ಸಾಧಿಸುವ ಮೂಲಕ ಪಿಕಾರ್ಡ್ ಬ್ಯಾಂಕ್ನ ಅಧಿಕಾರ ಹಿಡಿಯುವಷ್ಟು ಸಂಖ್ಯಾಬಲವನ್ನು ಜೆಡಿಎಸ್ ದಕ್ಕಿಸಿಕೊಂಡಿದೆ.
ಶಿಡ್ಲಘಟ್ಟ ನಗರ ಬಿಸಿಎಂ ಬಿ ವರ್ಗ ಮೀಸಲು ಕ್ಷೇತ್ರ-ಎಂ.ಮುರಳಿ, ಆನೂರು ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರ-ಬಂಕ್ ಮುನಿಯಪ್ಪ, ಅಬ್ಲೂಡು ಸಾಮಾನ್ಯ ಕ್ಷೇತ್ರ-ಚಂದ್ರನಾಥ್, ಮೇಲೂರು ಸಾಮಾನ್ಯ ಕ್ಷೇತ್ರ-ಎಂ.ಜಿ.ಸುರೇಶ್, ಜಂಗಮಕೋಟೆ ಸಾಮಾನ್ಯ ಕ್ಷೇತ್ರ-ಕಾಳನಾಯಕನಹಳ್ಳಿ ಬೀಮೇಶ್ ಗೆಲುವು ಸಾಧಿಸಿದ್ದಾರೆ.
ದಿಬ್ಬೂರಹಳ್ಳಿ ಸಾಮಾನ್ಯ ಕ್ಷೇತ್ರ-ಡಿ.ಶ್ರೀನಿವಾಸ್, ದೊಡ್ಡತೇಕಹಳ್ಳಿ ಸಾಮಾನ್ಯ ಕ್ಷೇತ್ರ-ಡಿ.ಎನ್.ರಾಮಚಂದ್ರ, ವೈ.ಹುಣಸೇನಹಳ್ಳಿ ಮಹಿಳಾ ಮೀಸಲು ಕ್ಷೇತ್ರ-ಭಾಗ್ಯಮ್ಮ, ಗಂಜಿಗುಂಟೆ ಸಾಮಾನ್ಯ ಕ್ಷೇತ್ರ-ಎಂ.ಪಿ.ರವಿ, ಸಾದಲಿ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರ-ನರಸಿಂಹಪ್ಪ ವಿಜಯದ ಮಾಲೆ ಧರಿಸಿದ್ದಾರೆ.
ಇನ್ನು ಚೀಮಂಗಲ ಮಹಿಳಾ ಮೀಸಲು ಕ್ಷೇತ್ರ-ಸುನಂದಮ್ಮ, ಪಲಿಚೇರ್ಲು ಹಿಂದುಳಿದ ವರ್ಗ ಎ ಮೀಸಲು ಕ್ಷೇತ್ರ-ಡಿ.ವಿ.ವೆಂಕಟೇಶ್, ಮಳಮಾಚನಹಳ್ಳಿ ಸಾಮಾನ್ಯ ಕ್ಷೇತ್ರ-ಎಚ್.ಕೆ.ಮಂಜುನಾಥ್ ಹಾಗೂ ಸಾಲಗಾರರಲ್ಲದ ಮತ ಕ್ಷೇತ್ರದಿಂದ ಕೆ.ಪಿ.ಕಿಶೋರ್ ಜಯಗಳಿಸಿದ್ದಾರೆ.
ಲಾಟರಿಯ ಗೆಲುವು :
ವೈ.ಹುಣಸೇನಹಳ್ಳಿ ಮಹಿಳಾ ಮೀಸಲು ಕ್ಷೇತ್ರದಿಂದ ಸ್ಪರ್ಧಿಸಿದ್ದ ಭಾಗ್ಯಮ್ಮ ಹಾಗೂ ಅನುಸೂಯಮ್ಮ ತಲಾ 17 ಮತಗಳನ್ನು ಪಡೆದಿದ್ದರಿಂದ ಲಾಟರಿ ಹಾಕಿದ್ದು ಲಾಟರಿಯಲ್ಲಿ ಜೆಡಿಎಸ್ ನ ಭಾಗ್ಯಮ್ಮಗೆ ವಿಜಯ ಒಲಿದು ಬಂದಿದೆ. ಇನ್ನು ಆನೂರು ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದಿಂದ ಅಭ್ಯರ್ಥಿಗಳನ್ನೆ ಹಾಕದ್ದರಿಂದ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಬಂಕ್ ಮುನಿಯಪ್ಪ ಅವಿರೋಧವಾಗಿ ಆಯ್ಕೆಯಾಗುವಂತಾಯಿತು.
ಒಂದು ಮತದ ಅಂತರ :
ಸಾದಲಿ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಿಂದ ಸ್ಪರ್ಧಿಸಿದ್ದ ಜೆಡಿಎಸ್ ಬೆಂಬಲಿತ ನರಸಿಂಹಪ್ಪ ತನ್ನ ಎದುರಾಳಿ ಚಿಕ್ಕವೆಂಕಟಪ್ಪ ವಿರುದ್ದ ಕೇವಲ ಒಂದು ಮತದ ಅಂತರದಿಂದ ವಿಜಯದ ಮಾಲೆ ಧರಿಸಿದ್ದಾರೆ.