
ಶಿಡ್ಲಘಟ್ಟ ತಾಲ್ಲೂಕು ಬ್ರಾಹ್ಮಣ ಮಹಾಸಭಾ, ಶಂಕರ ಸೇವಾ ಟ್ರಸ್ಟ್, ತಾಲ್ಲೂಕು ಬ್ರಾಹ್ಮಣ ಯುವಕ ಸಂಘ, ಗಾಯತ್ರಿ ಮಹಿಳಾ ಮಂಡಳಿ ಹಾಗೂ ವಿಪ್ರ ಪ್ರತಿಭಾ ಪುರಸ್ಕಾರ ಮತ್ತು ಸೇವಾ ಟ್ರಸ್ಟ್ ವತಿಯಿಂದ ಶಂಕರ ಜಯಂತಿ ಮಹೋತ್ಸವ ಮತ್ತು ಸಾಮೂಹಿಕ ಧರ್ಮೋಪನಯನಗಳನ್ನು ಶುಕ್ರವಾರ ಏಕಾಂಬರೇಶ್ವರಸ್ವಾಮಿ ದೇವಾಲಯ ಮತ್ತು ಶಂಕರಮಠದಲ್ಲಿ ಶ್ರದ್ಧಾಭಕ್ತಿಯಿಂದ ಆಚರಿಸಿದರು.
ಕಳೆದ ಐದು ದಿನಗಳಿಂದ ವಿವಿಧ ಪೂಜಾ ಕಾರ್ಯಕ್ರಮಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ದೇವಾಲಯದಲ್ಲಿ ಆಯೋಜಿಸಲಾಗಿತ್ತು. ಗಾಯತ್ರಿ ಮಹಿಳಾ ಮಂಡಳಿಯವರಿಂದ ದೇವತಾ ಸ್ತೋತ್ರಗಳು, ಕಲಾವಿದರ ವೃಂದದವರಿಂದ ದೇವರ ನಾಮಗಳ ಗಾಯನ, ವಿಪ್ರ ಮಹಿಳೆಯರಿಂದ ಲಲಿತಾ ಸಹಸ್ರನಾಮ ಕುಂಕುಮಾರ್ಚನೆ, ಉಪನ್ಯಾಸವನ್ನು ನಡೆಸಲಾಯಿತು.
ಶುಕ್ರವಾರ ನಾಲ್ಕು ವಟುಗಳಿಗೆ ಉಪನಯನ ಮತ್ತು ಬ್ರಹ್ಮೋಪದೇಶವನ್ನು ನೀಡಲಾಯಿತು. ದೇವಾಲಯದಲ್ಲಿ ಪಾನಕ ಪೂಜೆ, ಋತ್ವಿಕ್ ಸಮಾರಾಧನೆ ಮತ್ತು ಬ್ರಾಹ್ಮಣರಿಗೆ ಸಂತರ್ಪಣೆಯನ್ನು ನಡೆಸಲಾಯಿತು. ವಟುಗಳನ್ನು ಸತ್ಕರಿಸಲಾಯಿತು.
“ಕಳೆದ ಮೂವತ್ತೆಂಟು ವರ್ಷಗಳಿಂದ ವಟುಗಳಿಗೆ ಧರ್ಮೋಪನಯನಗಳನ್ನು ತಾಲ್ಲೂಕು ಬ್ರಾಹ್ಮಣ ಮಹಾಸಭಾ ನಡೆಸುಕೊಂಡು ಬರುತ್ತಿದ್ದು, ಉಪನಯನ ದೀಕ್ಷೆ ನೀಡಿ, ಧರ್ಮದ ಏಳಿಗೆಗೆ ಮತ್ತು ಸಾಮಾಜಿಕ ಪ್ರಗತಿಗೆ ವಟುಗಳಿಗೆ ಮಾರ್ಗದರ್ಶನ ನೀಡುತ್ತಿದ್ದೇವೆ. ಶಂಕರರ ಜನ್ಮದಿನವನ್ನು ವಿಶ್ವದಾರ್ಶನಿಕರ ದಿನವನ್ನಾಗಿ ಆಚರಿಸಲಾಗುತ್ತಿದೆ” ಎಂದು ಬ್ರಾಹ್ಮಣ ಮಹಾಸಭಾ ತಾಲ್ಲೂಕು ಅಧ್ಯಕ್ಷ ಎ.ಎಸ್.ರವಿ ತಿಳಿಸಿದರು.
ತಹಶೀಲ್ದಾರ್ ರಾಜೀವ್, ನಗರಸಭೆ ಪೌರಾಯುಕ್ತ ಆರ್.ಶ್ರೀಕಾಂತ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ, ಶಂಕರ ಸೇವಾ ಟ್ರಸ್ಟ್ ಅಧ್ಯಕ್ಷ ಎಸ್.ಆರ್.ಶ್ರೀನಿವಾಸಮೂರ್ತಿ, ಕಾರ್ಯದರ್ಶಿ ಬಿ.ಆರ್.ಅನಂತಕೃಷ್ಣ, ರಾಘವೇಂದ್ರಸ್ವಾಮಿ ಸೇವಾ ಟ್ರಸ್ಟ್ ಅಧ್ಯಕ್ಷ ಎಸ್.ವಿ.ನಾಗರಾಜರಾವ್, ಬ್ರಾಹ್ಮಣ ಮಹಾಸಭಾ ತಾಲ್ಲೂಕು ಅಧ್ಯಕ್ಷ ಎ.ಎಸ್.ರವಿ, ತಾಲ್ಲೂಕು ಬ್ರಾಹ್ಮಣ ಯುವಕ ಸಂಘದ ಅಧ್ಯಕ್ಷ ವೈಶಾಖ್ ಮಂಜುನಾಥ್, ವಿ.ಕೃಷ್ಣ, ಬಿ.ಕೃಷ್ಣಮೂರ್ತಿ, ಎಸ್.ಆರ್.ಶ್ರೀನಾಥ್, ಬಿ.ಆರ್.ನಟರಾಜ್, ಎನ್.ಕೆ.ಗುರುರಾಜರಾವ್, ಎ.ಎಸ್.ವೆಂಕಟೇಶ್, ಎ.ಎಸ್.ಹರೀಶ್ ಬಾಬು, ಎಸ್.ಶ್ರೀಕಾಂತ್, ಎಸ್.ಸತೀಶ್, ಭಾಸ್ಕರ್, ಸುಬ್ರಮಣ್ಯಶಾಸ್ತ್ರಿ, ವಿಜಯನರಸಿಂಹಶಾಸ್ತ್ರಿ, ಲಕ್ಷ್ಮೀನಾರಾಯಣ್(ಲಚ್ಚಿ), ಗಾಯತ್ರಿ ಮಹಿಳಾ ಮಂಡಳಿ ಸದಸ್ಯರು ಹಾಜರಿದ್ದರು.