
Jangamakote, Sidlaghatta : “ಯಾವೊಬ್ಬರ ಬದುಕೂ ಶಾಶ್ವತವಲ್ಲ. ನಾವು ಇದ್ದವರೆಗೆ ಈ ಸಮಾಜಕ್ಕೆ ಏನಾದರೂ ಒಳ್ಳೆಯದನ್ನು ಮಾಡೋ ನಿಟ್ಟಿನಲ್ಲಿ ಬದುಕನ್ನು ಸಾಗಿಸೋಣ. ಎಲ್ಲರ ಜೀವನದಲ್ಲಿ ಗುರಿ ಇರಬೇಕು, ಆ ಗುರಿಗೆ ತಲುಪಲು ಒಬ್ಬ ಗುರುವಿನ ಮಾರ್ಗದರ್ಶನ ಅಗತ್ಯ” ಎಂದು ಶಿವನಾಪುರ ವಹ್ನಿಕುಲ ಶಕ್ತಿ ಪೀಠದ ಶ್ರೀಪ್ರಣವಾನಂದಪುರಿ ಸ್ವಾಮೀಜಿ ಭಕ್ತರಿಗೆ ಆಶೀರ್ವಚನ ನೀಡಿದರು.
ಶಿಡ್ಲಘಟ್ಟ ತಾಲ್ಲೂಕಿನ ಜಂಗಮಕೋಟೆಯಲ್ಲಿ ನಡೆದ ಶ್ರೀ ಧರ್ಮರಾಯಸ್ವಾಮಿ ಹಾಗೂ ದ್ರೌಪತಮ್ಮದೇವಿಯ 73ನೇ ವರ್ಷದ ಹೂವಿನ ಕರಗ ಮಹೋತ್ಸವದ ಅಂಗವಾಗಿ ಆಯೋಜಿಸಲಾದ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
“ಇಂದಿನ ಒತ್ತಡದ ಬದುಕಿನಲ್ಲಿ ನಾವು ನಮ್ಮನ್ನು ಮರೆತಂತೆ ಬದುಕುತ್ತಿದ್ದೇವೆ. ಆರೋಗ್ಯವನ್ನೂ, ಮನಶ್ಶಾಂತಿಯನ್ನು ಕೂಡ ನಾವೇ ಕಡೆಗಣಿಸುತ್ತಿದ್ದೇವೆ. ಇದರಿಂದ ನಮ್ಮ ಜೀವನದ ಗುಣಮಟ್ಟ ಇಳಿಯುತ್ತಿದೆ” ಎಂದು ಅವರು ವಿಷಾದ ವ್ಯಕ್ತಪಡಿಸಿದರು.
“ಇವತ್ತು ಕಷ್ಟದಲ್ಲಿರುವವರಿಗೆ ಸಹಾಯ ಮಾಡಲು ಜನ ಹಿಂಜರಿಯುತ್ತಿದ್ದಾರೆ. ಅಸೂಯೆ, ದ್ವೇಷ ಹೆಚ್ಚು ಆಗುತ್ತಿದೆ. ಈ ರೀತಿಯ ಮನೋಭಾವಗಳು ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಪ್ರಭಾವ ಬೀರುತ್ತವೆ. ಧಾರ್ಮಿಕ ಮತ್ತು ಸಮಾಜಮುಖಿ ಕೆಲಸಗಳಲ್ಲಿ ತೊಡಗುವ ಮೂಲಕ ಎಲ್ಲರಿಗೂ ಶಾಂತಿ, ಸಮಾನತೆ ತರಲು ಸಾಧ್ಯ” ಎಂದು ಹೇಳಿದರು.
ಕಾರ್ಯಕ್ರಮದ ವಿಶೇಷ ಅತಿಥಿಯಾಗಿ ಭಾಗವಹಿಸಿದ ಕೆಪಿಸಿಸಿ ಸಂಯೋಜಕ ರಾಜೀವ್ ಗೌಡ ಅವರು, “ಜಂಗಮಕೋಟೆಯಲ್ಲಿ ಎಲ್ಲ ಜಾತಿ ಧರ್ಮದವರು ಸೇರಿ ಒಂದಾಗಿ ಈ ಹಬ್ಬವನ್ನು ಆಚರಿಸುತ್ತಿರುವುದು ಸಮಾಜದ ಏಕತೆಯ ಸಂಕೇತ” ಎಂದು ಹೇಳಿದರು.
ಹೂವಿನ ಕರಗದ ಅಂಗವಾಗಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಮಕ್ಕಳ ಭರತನಾಟ್ಯ, ಏಕಪಾತ್ರಾಭಿನಯ, ನಾಟಕ ಪ್ರದರ್ಶನ, ಕೀಲು ಕುದುರೆ ಹಾಗೂ ಜನಪದ ಕಲಾ ತಂಡಗಳ ಪ್ರದರ್ಶನ ಭಕ್ತರನ್ನು ಆಕರ್ಷಿಸಿತು.
ಕಾರ್ಯಕ್ರಮದಲ್ಲಿ ಶ್ರೀಧರ್ಮರಾಯಸ್ವಾಮಿ ಸೇವಾ ಅಭಿವೃದ್ದಿ ಟ್ರಸ್ಟ್ನ ಗೋಪಾಲಪ್ಪ, ಜಯರಾಂ, ಮುರಳಿ, ಆಂಜಿನಪ್ಪ, ಚಂದ್ರು, ಪುನೀತ್, ವೇಣು, ರೈತ ಮುಖಂಡ ಹೀರೆಬಲ್ಲ ಕೃಷ್ಣಪ್ಪ, ಜೆ.ಎನ್. ನಾಗರಾಜ್, ನಾಗನರಸಿಂಹ, ಹೊಸಪೇಟೆ ಮಂಜುನಾಥ್, ಜಾನಿ ಹಾಗೂ ಇತರರು ಭಾಗವಹಿಸಿದ್ದರು.