ಕೋಲಾರ ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ವ್ಯಾಪ್ತಿಗೆ ಬರುವ ಎಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ನೌಕರರನ್ನು ಕೊರೋನಾ ಫ್ರಂಟ್ ಲೈನ್ ವಾರಿಯರ್ಸ್ ಎಂದು ಪರಿಗಣಿಸಿ ಲಸಿಕೆ ನೀಡಲು ಮುಂದಾಗಬೇಕು ಎಂದು ತಾಲ್ಲೂಕು ಹಾಲು ಉತ್ಪಾದಕರ ನೌಕರರ ಸಂಘದ ಅಧ್ಯಕ್ಷ ಚಂದ್ರೇಗೌಡ ಒತ್ತಾಯಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು ಕೊರೋನಾ ಎರಡನೇ ಅಲೆಯ ಹಿನ್ನಲೆಯಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳು ಸೇರಿದಂತೆ ಕೊರೊನಾ ಬಂದಿರುವ ವ್ಯಕ್ತಿಗಳ ಮನೆಯ ಸದಸ್ಯರು ಸಹಕಾರ ಸಂಘಕ್ಕೆ ಹಾಲು ತಂದು ಹಾಕುತ್ತಿರುವುದರಿಂದ ನೌಕರರು ಭಯದ ವಾತಾವರಣದಲ್ಲಿ ಕಾರ್ಯ ನಿರ್ವಹಿಸಬೇಕಿದೆ. ಈಗಾಗಲೇ ಹಲವು ಸಂಘಗಳ ಕಾರ್ಯದರ್ಶಿಗಳು ಇದರಿಂದ ಮೃತಪಟ್ಟಿದ್ದರೂ ಒಕ್ಕೂಟದ ಅಧಿಕಾರಿಗಳು ಹಾಗೂ ಕಾರ್ಯಕಾರಿ ಮಂಡಳಿಯವರು ನೌಕರರಿಗೆ ಯಾವುದೇ ಭದ್ರತೆ ನೀಡಲು ಮುಂದಾಗದೇ ಇರುವುದು ದುರಂತವೇ ಸರಿ,
ಕೂಡಲೇ ಒಕ್ಕೂಟದ ವ್ಯಾಪ್ತಿಗೆ ಬರುವ ಎಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ನೌಕರರಿಗೆ ಸೂಕ್ತ ಭದ್ರತೆ ಹಾಗೂ ಆರ್ಥಿಕ ನೆರವು ನೀಡಲು ಒಕ್ಕೂಟದ ಅಧಿಕಾರಿಗಳು ಸೇರಿದಂತೆ ಕಾರ್ಯಕಾರಿ ಮಂಡಳಿ ಮುಂದಾಗಬೇಕು. ಸಹಕಾರ ಸಂಘಗಳ ನೌಕರರನ್ನು ಕೊರೊನಾ ವಾರಿಯರ್ಸ್ ಎಂದು ಪರಿಗಣಿಸಿ ಶೀಘ್ರ ಲಸಿಕೆ ನೀಡಲು ಮುಂದಾಗಬೇಕು ಎಂದು ಅವರು ಒತ್ತಾಯಿಸಿದ್ದಾರೆ.