ಬಯಲು ಸೀಮೆ ಪ್ರದೇಶದಲ್ಲಿ ಹಸುಗಳಿಗೆ ಪೌಷ್ಠಿಕಾಂಶವುಳ್ಳ ಮೇವಿನ ಕೊರತೆಯಿಂದಾಗಿ ಬರಡು ರಾಸುಗಳ ಸಂಖ್ಯೆ ಹೆಚ್ಚುತ್ತಿದೆ ಎಂದು ಬರಡು ರಾಸು ಚಿಕಿತ್ಸಾ ತಜ್ಞ ಡಾ.ಪ್ರಕಾಶ್ ತಿಳಿಸಿದರು.
ತಾಲ್ಲೂಕಿನ ಮಳ್ಳೂರು ಗ್ರಾಮದಲ್ಲಿ ಬುಧವಾರ ಹಾಲು ಉತ್ಪಾದಕರ ಸಹಕಾರ ಸಂಘ, ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಹಾಗೂ ಕೋಚಿಮುಲ್ ಒಕ್ಕೂಟದ ವತಿಯಿಂದ ನಡೆದ ಬರಡು ರಾಸು ತಪಾಸಣೆ ಮತ್ತು ಮೇವು ಉತ್ಪಾದನಾ ತರಬೇತಿ ಶಿಬಿರದಲ್ಲಿ ಅವರು ಮಾತನಾಡಿದರು.
ರೈತರು ಹಸುಗಳಿಗೆ ಪೌಷ್ಠಿಕಾಂಶವುಳ್ಳ ಹಸಿ ಮೇವು, ಒಣ ಹುಲ್ಲು, ನೇಪಿಯರ್ ಹುಲ್ಲು, ಹಲಸಂದಿ, ಹುರುಳಿ, ಹಿಪ್ಪುನೇರಳೆ ಕಡ್ಡಿ ಮತ್ತು ಕೆ.ಎಂ.ಎಫ್ನ ಮಿಶ್ರಣ ಪಶು ಆಹಾರ ನೀಡುವುದರ ಮುಖಾಂತರ ಗರ್ಭಧಾರಣೆ ಸಮಸ್ಯೆಯನ್ನು ನಿವಾರಿಸಬಹುದು. ಶುಚಿತ್ವವಿಲ್ಲದೆ ಗರ್ಭಕೋಶದ ಸೋಂಕು ಉಂಟಾಗುತ್ತದೆ ಎಂದು ಹೇಳಿದರು.
ತಾಲ್ಲೂಕು ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಸಹಾಯಕ ನಿರ್ದೇಶಕ ಡಾ.ಮುನಿನಾರಾಯಣರೆಡ್ಡಿ ಮಾತನಾಡಿ, ಹಸುಗಳಿಗೆ ಪೌಷ್ಠಿಕಾಂಶದ ಕೊರತೆಯಿಂದಾಗಿ ಶೇಕಡಾ 65–70 ರಷ್ಟು ಗರ್ಭಧಾರಣಾ ಸಮಸ್ಯೆ ಉಂಟಾಗುತ್ತದೆ. ನೀರಿನ ಕೊರತೆಯಿಂದ ಮೇವು ಉತ್ಪಾದನೆ ಕುಂಠಿತಗೊಂಡು, ರಾಸಾಯನಿಕ ಸಿಂಪಡಿಸಿರುವ ಮೇವು ಬಳಸುವುದರಿಂದ ರಾಸುಗಳ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಇದರಿಂದ ಹಸುಗಳ ಜೀರ್ಣಕ್ರಿಯೆ ಮತ್ತು ರೋಗ ತಡೆದುಕೊಳ್ಳುವ ಶಕ್ತಿ ಕ್ಷೀಣಿಸುತ್ತಿದೆ ಎಂದರು.
ಕೋಚಿಮುಲ್ ಅಧಿಕಾರಿ ಸುಷ್ಮಾ ಹೈಡ್ರೋಫೋನಿಕ್ ತಂತ್ರಜ್ಞಾನ ಬಳಸಿ ಮೇವು ಉತ್ಪಾದಿಸುವ ಬಗ್ಗೆ ವಿವರಿಸಿದರು.
ಮಳ್ಳೂರು ಪಶು ಆಸ್ಪತ್ರೆಯ ವೈದ್ಯ ಡಾ.ಗಂಗಾಧರ್, ನೀರಾವರಿ ಹೋರಾಟ ಸಮಿತಿ ಉಪಾಧ್ಯಕ್ಷ ಮಳ್ಳೂರು ಹರೀಶ್, ಡಾ.ಈಶ್ವರಯ್ಯ, ಡಾ.ಅರುಣ್ಕುಮಾರ್, ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಶ್ರೀಧರ್, ಮಂಜುನಾಥಬಾಬು, ಮುನಿಕೃಷ್ಣಪ್ಪ, ದೇವರಾಜ್, ಅಮರ್, ಪ್ರಕಾಶ್, ಕೇಶವಮೂರ್ತಿ, ಕೆಂಪೇಗೌಡ, ಬೈರೇಗೌಡ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.