ತಾಲ್ಲೂಕಿನ ಬೆಳ್ಳೂಟಿ ಗೇಟ್ ಬಳಿಯಿರುವ ಹಜರತ್ ಗೈಬ್ ಷಾ ವಲೀ ದರ್ಗಾದಲ್ಲಿ ಬುಧವಾರ ರಾತ್ರಿ ಗಂಧದ ಅಭಿಷೇಕ, ಉರುಸ್ ಹಾಗೂ ಖವ್ವಾಲಿಯನ್ನು ಆಯೋಜಿಸಲಾಗಿತ್ತು.
ಹಜರತ್ ಗೈಬ್ ಷಾ ವಲೀ ದರ್ಗಾವನ್ನು ದಿದ್ಯುತ್ ದೀಪಗಳಿಂದ ಮತ್ತು ವಿವಿಧ ಹೂಗಳಿಂದ ಅಲಂಕರಿಸಲಾಗಿದ್ದು, ಹಿಂದೂ ಮುಸ್ಲಿಂ ಬೇಧವಿಲ್ಲದೆ ಎಲ್ಲಾ ಜನಾಂಗದವರೂ ಪೂಜೆ ಸಲ್ಲಿಸಿದರು.
ಬೆಳ್ಳೂಟಿ ಗೇಟ್ ಬಳಿ ಗುಟ್ಟಾಂಜನೇಯಸ್ವಾಮಿ ದೇವಾಲಯ, ಹಜರತ್ ಗೈಬ್ ಷಾ ವಲೀ ದರ್ಗಾ ಮತ್ತು ಚರ್ಚ್ ಅಕ್ಕಪಕ್ಕದಲ್ಲೇ ಇದೆ. ಈ ಸ್ಥಳವು ಎಲ್ಲಾ ಧರ್ಮದ ಭಾವೈಕ್ಯತೆಯ ಪ್ರತೀಕವಾಗಿದೆ.
‘ಸುಮಾರು ಮುನ್ನೂರು ವರ್ಷದ ಇತಿಹಾಸವಿರುವ ಹಜರತ್ ಗೈಬ್ ಷಾ ವಲೀ ದರ್ಗಾಗೆ ಎಲ್ಲಾ ಧರ್ಮೀಯರೂ ಬಂದು ಪೂಜೆ ಸಲ್ಲಿಸುತ್ತಾರೆ. ರಾಜ್ಯದ ಹಲವಾರು ಊರು ಹಾಗೂ ನಗರಗಳಿಂದ ಭಕ್ತರು ಇಲ್ಲಿಗೆ ಬರುತ್ತಾರೆ. ಪ್ರತೀ ವರ್ಷ ಇಲ್ಲಿ ಆಚರಿಸುವ ಉರುಸ್ ಖ್ಯಾತಿಯಾಗಿದೆ. ಹಬ್ಬದ ವಾತಾವರಣ ಇಲ್ಲಿ ಸೃಷ್ಠಿಯಾಗುತ್ತದೆ. ಈ ಸಂದರ್ಭದಲ್ಲಿ ಹಲವಾರು ಅಂಗಡಿಮುಂಗಟ್ಟುಗಳು ತೆರೆಯಲಾಗುತ್ತದೆ. ಮಕ್ಕಳ ಆಟಿಕೆಗಳು, ಸುಗಂಧ, ಸಮೋಸಾ ಮುಂತಾದ ತಿನಿಸುಗಳು ಇಲ್ಲಿ ತಂದು ಮಾರುತ್ತಾರೆ. ಮನೆಗಳಿಂದ ಊಟ ತಂದು ಇಲ್ಲಿ ಪೂಜೆ ಸಲ್ಲಿಸಿ ತಿಂದು, ರಾತ್ರಿಯೆಲ್ಲಾ ಇಲ್ಲಿ ನಡೆಯುವ ಉರುಸ್ ಮತ್ತು ಖವ್ವಾಲಿಯನ್ನು ವೀಕ್ಷಿಸಿ ಬೆಳಗಿನ ಜಾವ ತೆರಳುವ ವಾಡಿಕೆಯಿದೆ’ ಎಂದು ಪುರಸಭಾ ಸದಸ್ಯ ಷಫೀ ತಿಳಿಸಿದರು.