Home News ‘ಸೌಹಾರ್ದತೆಗಾಗಿ ಮಾನವ ಸರಪಳಿ’

‘ಸೌಹಾರ್ದತೆಗಾಗಿ ಮಾನವ ಸರಪಳಿ’

0

ಕೋಮುವಾದಕ್ಕೆ ಪ್ರತಿಯಾಗಿ ಸಾಮರಸ್ಯವನ್ನು, ದ್ವೇಷಕ್ಕೆ ಪ್ರತಿಯಾಗಿ ಸ್ನೇಹವನ್ನು, ಕುತಂತ್ರಕ್ಕೆ ಪ್ರತಿಯಾಗಿ ಪ್ರಾಮಾಣಿಕತೆಯನ್ನು ಎತ್ತಿ ಹಿಡಿಯಬೇಕಿದೆ. ಕೋಮುವಾದವನ್ನು ಹತ್ತಿಕ್ಕಲು ಗಾಂಧೀಜಿ ಹುತಾತ್ಮರಾದ ಈ ದಿನ ‘ಸೌಹಾರ್ದತೆಗಾಗಿ ಮಾನವ ಸರಪಳಿ’ ನಿರ್ಮಿಸುತ್ತಿದ್ದೇವೆ ಎಂದು ಸಿ.ಐ.ಟಿ.ಯು ಜಿಲ್ಲಾಧ್ಯಕ್ಷೆ ಜಿ.ಎಂ.ಲಕ್ಷ್ಮೀದೇವಮ್ಮ ತಿಳಿಸಿದರು.
ನಗರದ ತಾಲ್ಲೂಕು ಕಚೇರಿಯ ಮುಂಭಾಗದಲ್ಲಿ ಮಂಗಳವಾರ ವಿವಿಧ ಸಂಘಟನೆಗಳ ಜತೆಗೂಡಿ ಮಾನವ ಸರಪಳಿ ನಿರ್ಮಿಸಿ ಅವರು ಮಾತನಾಡಿದರು.
ಶಾಂತಿ, ಸೌಹಾರ್ದ, ಸಹಬಾಳ್ವೆಗೆ ಕನ್ನಡನಾಡು ಶತಮಾನಗಳಿಂದಲೂ ಹೆಸರುವಾಸಿಯಾಗಿದೆ. ಇತ್ತೀಚಿನ ದಿನಗಳಲ್ಲಿ ಕೋಮುಸೌಹಾರ್ದವನ್ನು ಕೆಡಿಸಿ ಕೋಮುಜ್ವಾಲೆ ಹಬ್ಬಿಸುವ ಪ್ರಯತ್ನ ನಡೆಯುತ್ತಿದೆ. ರಾಜಕೀಯ ಪ್ರೇರಿತವಾದ ಇಂತಹ ಪ್ರಯತ್ನಗಳು ‘ಸರ್ವ ಜನಾಂಗದ ಶಾಂತಿಯ ತೋಟ’ವಾಗಿದ್ದ ನಮ್ಮ ಪರಂಪರೆಗೆ ವಿರುದ್ಧವಾಗಿದೆ. ಕೋಮುದ್ವೇಷ ಬಿತ್ತಿ ಬೆಳೆಯುವವರು ಯಾವುದೇ ಜಾತಿಯವರಾಗಲಿ ನಮ್ಮವರಾಗಲು ಸಾಧ್ಯವಿಲ್ಲ. ಕನ್ನಡ ಪರಂಪರೆಯ ನಿಜ ವಾರಸುದಾರರು ಎಂದಿಗೂ ಕೋಮುವಾದಿಗಳಲ್ಲ. ಉಗ್ರವಾದಿಗಳೂ ಅಲ್ಲ. ಸ್ನೇಹದ ಸಾಮರಸ್ಯದ ಸಂದೇಶವನ್ನು ರಾಜ್ಯದ ಎಲ್ಲಾ ಭಾಗಗಳಲ್ಲಿ ಹರಡುವುದು ಶಾಂತಿಪ್ರಿಯರ ಕರ್ತವ್ಯವಾಗಬೇಕು. ಕೋಮುವಾದಿಯೊಬ್ಬನ ಗುಂಡಿಗೆ ಬಲಿಯಾಗಿ ಜನವರಿ 30 ರಂದೇ ಭಾರತದ ರಾಷ್ಟ್ರಪಿತ ಮಹಾತ್ಮ ಗಾಂಧಿ ಹುತಾತ್ಮರಾದರು. ಹಾಗಾಗಿ ಅದು ಮತ್ತೆ ಮರುಕಳಿಸದಂತೆ ಕೋಮುವಾದವನ್ನು ಹತ್ತಿಕ್ಕಲು ಒಗ್ಗೂಡೋಣ ಎಂದು ಹೇಳಿದರು.
ರಾಜ್ಯ ರೇಷ್ಮೆ ಹಿತರಕ್ಷಣಾ ಹೋರಾಟ ಸಮಿತಿಯ ರಾಜ್ಯ ಮುಖಂಡ ಮಳ್ಳೂರು ಶಿವಣ್ಣ ಮಾತನಾಡಿ, ಕೋಮು ಸಾಮರಸ್ಯವನ್ನು ಹರಡೋಣ, ಶಾಂತಿ ಸಂದೇಶ ಸಾರೋಣ ಎಂದರು.
ಸಿ.ಐ.ಟಿ.ಯು ತಾಲ್ಲೂಕು ಸಂಘಟನಾ ಸಂಚಾಲಕ ಫಯಾಜ್, ಕೆ.ಎನ್.ಪಾಪಣ್ಣ, ಅಶ್ವತ್ಥಮ್ಮ, ಗುಲ್ಜಾರ್, ರೈತ ಸಂಘದ ಹುಸೇನ್ಸಾಬ್, ರವಿಪ್ರಕಾಶ್, ಪ್ರತೀಶ್, ನಹೀಂಪಾಷ, ಗೋವಿಂದಪ್ಪ, ಮೊಹಮ್ಮದ್, ಅಶ್ವತ್ಥನಾರಾಯಣ ಹಾಜರಿದ್ದರು.