ತಾಲ್ಲೂಕಿನ ಅಬ್ಲೂಡು ಮತ್ತು ಈ.ತಿಮ್ಮಸಂದ್ರ ಪಂಚಾಯತಿಯ ಎಲ್ಲಾ ಗ್ರಾಮಸ್ಥರೂ ಶಾಶ್ವತ ನೀರಾವರಿ ಬೇಕೆಂದು ಒತ್ತಾಯಿಸಿ ಚುನಾವಣೆ ಬಹಿಷ್ಕರಿಸುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿದ್ದಾರೆ.
ಗ್ರಾಮ ಪಂಚಾಯತಿ ಚುನಾವಣೆಗೆ ನಾಮಪತ್ರ ಸಲ್ಲಿಸಲು ಶುಕ್ರವಾರ ಕಡೆಯ ದಿನವಾಗಿದ್ದು, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಕಾವೇರಿ, ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಣಾಧಿಕಾರಿ ರಾಮಾಂಜಿನಪ್ಪ, ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ, ಚುನಾವಣಾಧಿಕಾರಿ ಸೇರಿದಂತೆ ಅಧಿಕಾರಿಗಳು ಗ್ರಾಮಸ್ಥರು ಮನವೊಲಿಸಲು ಅಬ್ಲೂಡಿಗೆ ಆಗಮಿಸಿದ್ದರು.
ಅಬ್ಲೂಡು ಪಂಚಾಯತಿ ಕಾರ್ಯಾಲಯದಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿದ್ದ ಪಂಚಾಯತಿಯ ವಿವಿಧ ಗ್ರಾಮಗಳ ಗ್ರಾಮಸ್ಥರು, ‘ನಾವು ಸ್ವಾರ್ಥಕ್ಕಾಗಿ ಚುನಾವಣೆ ಬಹಿಷ್ಕರಿಸಿಲ್ಲ. ಬಯಲು ಸೀಮೆಯ ಎಲ್ಲಾ ಜನರ ನೋವು ಹಾಗೂ ತೊಂದರೆ ನೀಗಿಸಲು ಶಾಶ್ವತ ನೀರಿಗಾಗಿ ಒತ್ತಾಯಿಸಿ ನಾವು ಚುನಾವಣೆಯನ್ನು ಬಹಿಷ್ಕರಿಸುತ್ತಿದ್ದೇವೆ. ಶಾಶ್ವತ ನೀರು ಸಿಗುವವರೆಗೂ ಮುಂಬರುವ ಎಲ್ಲಾ ಚುನಾವಣೆಗಳನ್ನೂ ಬಹಿಷ್ಕರಿಸುತ್ತೇವೆ’ ಎಂದು ಒಗ್ಗಟ್ಟಿನಿಂದ ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಕಾವೇರಿ ಮಾತನಾಡಿ, ‘ಪ್ರಜಾಪ್ರಭುತ್ವದಲ್ಲಿ ಚುನಾವಣೆಯು ಪ್ರಜೆಗಳಿಗೆ ಹಕ್ಕನ್ನು ನೀಡುವ ಪ್ರಕ್ರಿಯೆ. ಸರ್ಕಾರಕ್ಕೆ ಈ ಭಾಗದ ನೀರಿನ ಸಮಸ್ಯೆ ತಿಳಿದಿದ್ದು, ನೀರಿ ಬವಣೆ ನಿವಾರಿಸಲು ಎಲ್ಲಾ ಪ್ರಕ್ರಿಯೆಗಳೂ ಸಾಗಿವೆ. ಚುನಾವಣೆಯನ್ನು ಬಹಿಷ್ಕರಿಸದೆ ಭಾಗವಹಿಸಿ ಎಂದು ಕೋರಿದರೂ ಜನರು ಒಪ್ಪದ ಕಾರಣ ಹಿಂದಿರುಗುತ್ತಿದ್ದೇವೆ’ ಎಂದು ಹೇಳಿದರು.
ಅಬ್ಲೂಡು ಪಂಚಾಯತಿಯ 12 ಗ್ರಾಮಗಳಿಂದ 16 ಸದಸ್ಯರ ಆಯ್ಕೆ ನಡೆಯಬೇಕಿದ್ದುದು ಗ್ರಾಮಸ್ಥರ ಒಗ್ಗಟ್ಟಿನಿಂದ ಸ್ಥಗಿತಗೊಂಡಿದೆ.
ಶಾಶ್ವತ ನೀರಾವರಿ ಹೋರಾಟ ಸಮಿತಿಯ ಮುಖಂಡ ಭಕ್ತರಹಳ್ಳಿ ಬೈರೇಗೌಡ ಶಾಶ್ವತ ನೀರಾವರಿಗಾಗಿ ಚುನಾವಣೆ ಬಹಿಷ್ಕರಿಸಿದ ಗ್ರಾಮಸ್ಥರನ್ನು ಅಭಿನಂದಿಸಿದರು.
ಅಬ್ಲೂಡು ಸೊಣ್ಣಪ್ಪ, ಪಿಳ್ಳಪ್ಪ, ಸೋಮಶೇಖರ್, ಆರ್.ದೇವರಾಜ್, ಮುನಿವೆಂಕಟಸ್ವಾಮಿ, ಆಂಜಿನಪ್ಪ, ರಮೇಶ, ಆಂಜಿನಪ್ಪ, ಕನಕಪ್ರಸಾದ್, ಸೀನಪ್ಪ, ದೇವು, ವೀರಪ್ಪ, ಬೈರಪ್ಪ, ದ್ಯಾವಪ್ಪ, ಚಾಗೆ ಬೈರಪ್ಪ, ನಾರಾಯಣಪ್ಪ, ಬೈರೇಗೌಡ, ಶೆಟ್ಟಹಳ್ಳಿ ಮಂಜು, ಶ್ರೀರಾಮಪ್ಪ, ರಾಮಚಂದ್ರ, ಶ್ರೀನಿವಾಸ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
- Advertisement -
- Advertisement -
- Advertisement -
- Advertisement -