Home News ವಾಲ್ಮೀಕಿ ಭವನ ನಿರ್ಮಾಣಕ್ಕೆ ಶಂಕುಸ್ಥಾಪನೆ

ವಾಲ್ಮೀಕಿ ಭವನ ನಿರ್ಮಾಣಕ್ಕೆ ಶಂಕುಸ್ಥಾಪನೆ

0

ವಾಲ್ಮೀಕಿ ಸಮುದಾಯದವರು ತಮ್ಮ ಮಕ್ಕಳಿಗೆ ಮೌಲ್ಯಧಾರಿತ ಶಿಕ್ಷಣವನ್ನು ನೀಡುವ ಮೂಲಕ ಸಮಾಜದಲ್ಲಿ ಅತ್ಯತ್ತಮವಾದ ವ್ಯಕ್ತಿಗಳನ್ನಾಗಿ ರೂಪುಗೊಳಿಸುವಂತಹ ಕೆಲಸವನ್ನು ಮಾಡಬೇಕು ಎಂದು ಸಂಸದ ಕೆ.ಎಚ್.ಮುನಿಯಪ್ಪ ಹೇಳಿದರು.
ತಾಲ್ಲೂಕಿನ ತಲಕಾಯಲಬೆಟ್ಟ ಗ್ರಾಮದಲ್ಲಿ ಮಂಗಳವಾರ ಸುಮಾರು ೫೦ ಲಕ್ಷ ರೂಪಾಯಿಗಳ ವೆಚ್ಚದಲ್ಲಿ ನಿರ್ಮಾಣ ಮಾಡಲು ಉದ್ದೇಶಿಸಿರುವ ವಾಲ್ಮೀಕಿ ಭವನ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
ಶ್ರೀರಾಮನ ಜೀವನ ಚರಿತ್ರೆಯನ್ನು ಸಂಪೂರ್ಣವಾಗಿ ಬಿಡಿಸಿಟ್ಟು, ಶ್ರೀರಾಮನ ಮಕ್ಕಳಾದ ಲವಕುಶರನ್ನು ಶ್ರೀರಾಮರಿಗೆ ಸರಿಸಮಾನವಾಗಿ ಬೆಳೆಸಿದ ವಾಲ್ಮೀಕಿ ಮಹರ್ಷಿಯ ಅನುಯಾಯಿಗಳಾಗಿ ಹುಟ್ಟಿರುವ ಸಮುದಾಯದ ಪ್ರತಿಯೊಬ್ಬ ವ್ಯಕ್ತಿಯೂ ಸಮಾಜಕ್ಕೆ ಪ್ರಾಯೋಜಕರಾಗಬೇಕು. ಮಹರ್ಷಿ ವಾಲ್ಮೀಕಿಯವರ ದೂರದೃಷ್ಟಿ, ಇಡೀ ಮನಕುಲಕ್ಕೆ ಮಾರ್ಗದರ್ಶನವಾಗಿದೆ. ಅವರ ಕಲ್ಪನೆಯಂತೆ ಸಮಾಜದಲ್ಲಿನ ಬಡವರು, ಶೋಷಿತವರ್ಗದವರು, ಅಲ್ಪಸಂಖ್ಯಾತರು ಒಟ್ಟಾರೆ ಎಲ್ಲರೂ ಕೂಡಾ ಒಗ್ಗಟ್ಟಿನಿಂದ ಜೀವಿಸಬೇಕಾಗಿದೆ. ಅದ್ದರಿಂದ ಮಕ್ಕಳಿಗೆ ಯಾರೂ ಕದಿಯಲಾಗದಂತಹ ಸಂಪತ್ತಾದ ಶಿಕ್ಷಣವನ್ನು ನೀಡಿದರೆ, ಅವರು ಸಮಾಜದಲ್ಲಿ ಸಂಸ್ಕಾರವಂತರಾಗಿ ಬೆಳೆಯುತ್ತಾರೆ.
ತಾಲ್ಲೂಕಿನ ಸುಂಡ್ರಹಳ್ಳಿಯಲ್ಲಿ ಸುಮಾರು ೧೫ ಕೋಟಿ ರೂಪಾಯಿಗಳ ವೆಚ್ಚದಲ್ಲಿ ವಾಲ್ಮೀಕಿ ಆಶ್ರಮಶಾಲೆಯನ್ನು ನಿರ್ಮಾಣ ಮಾಡಲಾಗುತ್ತಿದೆ. ಶಿಡ್ಲಘಟ್ಟ ನಗರದಲ್ಲಿ ೧ ಕೋಟಿ ರೂಪಾಯಿಗಳ ವೆಚ್ಚದಲ್ಲಿ ವಾಲ್ಮೀಕಿ ಭವನ, ಹಾಗೂ ತಲಕಾಯಲಬೆಟ್ಟದಲ್ಲಿ ೫೦ ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಭವನ ನಿರ್ಮಾಣ ಮಾಡಲಾಗುತ್ತಿದ್ದು, ಈ ಭವನವನ್ನು ಸ್ಥಳೀಯ ಗ್ರಾಮ ಪಂಚಾಯತಿ ಆಡಳಿತ ನಿರ್ವಹಣೆ ಮಾಡಬೇಕು. ಕಟ್ಟಡದ ಕಾಮಗಾರಿಯ ಮೇಲ್ಛಾವಣಿ ಸಂಪೂರ್ಣವಾಗಿ ಆರ್.ಸಿ.ಸಿ.ಆಗಿರಬೇಕು. ನಿಗದಿತ ಸಮಯದಲ್ಲಿ ಗುಣಮಟ್ಟದಿಂದ ಕಾಮಗಾರಿಯನ್ನು ಪೂರ್ಣಗೊಳಿಸಬೇಕು. ಕಟ್ಟಡ ಕಾಮಗಾರಿಯ ಗುಣಮಟ್ಟವನ್ನು ತಹಶೀಲ್ದಾರ್ ಅವರು ನೋಡಿಕೊಳ್ಳಬೇಕು. ಸ್ಥಳೀಯರೂ ಕೂಡಾ ಕಾಮಗಾರಿಗಳ ಬಗ್ಗೆ ಗಮನಹರಿಸಬೇಕು. ವಾಲ್ಮೀಕಿ ಜನಾಂಗದವರಷ್ಟೆ ಅಲ್ಲದೆ, ಎಲ್ಲಾ ವರ್ಗದ ಜನಾಂಗದವರು ಈ ಭವನವನ್ನು ಉಪಯೋಗ ಮಾಡಿಕೊಳ್ಳಬಹುದಾಗಿದೆ. ಪರಿಶಿಷ್ಠ ಜಾತಿ, ಪರಿಶಿಷ್ಠ ವರ್ಗಗಳ ಜನಾಂಗದವರ ಜೀವನೋಪಾಯಕ್ಕಾಗಿ ಈಗಾಗಲೇ ಹಸುಗಳನ್ನು ವಿತರಣೆ ಮಾಡುವಂತಹ ಯೋಜನೆಯನ್ನು ಕೈಗೆತ್ತಿಕೊಂಡಿದ್ದು, ಮುಂದಿನ ಒಂದು ತಿಂಗಳಿನಲ್ಲಿ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದರು.
ಶಾಸಕ ಎಂ.ರಾಜಣ್ಣ ಮಾತನಾಡಿ, ಎಲ್ಲಾ ವರ್ಗದ ಜನರು ಶಿಕ್ಷಣವನ್ನು ಪಡೆಯುವುದರ ಮೂಲಕ ಸಮಾಜದಲ್ಲಿ ಪರಿವರ್ತನೆಯನ್ನು ಕಾಣಲು ಸಾಧ್ಯವಾಗುತ್ತದೆ. ಸರ್ಕಾರದಿಂದಲೂ ಅನೇಕ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದು, ಶಿಕ್ಷಣಕ್ಕೆ ಅಗತ್ಯವಾಗಿರುವಂತಹ ಎಲ್ಲಾ ಯೋಜನೆಗಳನ್ನು ಸದ್ಬಳಕೆ ಮಾಡಿಕೊಂಡು ಅಭಿವೃದ್ಧಿಯತ್ತ ಸಾಗಬೇಕು ಎಂದರು.
ಅಖಿಲ ಕರ್ನಾಟಕ ವಾಲ್ಮೀಕಿ ಮಹಾಸಭಾ ಜಿಲ್ಲಾ ಮುಖಂಡ ಬಂಕ್ಮುನಿಯಪ್ಪ ಮಾತನಾಡಿ, ತೀರಾ ಹಿಂದುಳಿದಿದ್ದ ವಾಲ್ಮೀಕಿ ಸಮುದಾಯವನ್ನು ಗುರ್ತಿಸಿದಂತಹ ಸರ್ಕಾರಗಳು ಸಮುದಾಯದ ಅಭಿವೃದ್ಧಿಗೆ ಪೂರಕವಾಗುವಂತಹ ಎಲ್ಲಾ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುತ್ತಿದೆ. ತಾಲ್ಲೂಕಿನ ಬಹುತೇಕ ಭಾಗಗಳು ಅಭಿವೃದ್ಧಿಯಿಂದ ವಂಚಿತವಾಗಿದೆ, ಕೇವಲ ಬೆರಳೆಣಿಕೆಯಷ್ಟು ಮಂದಿ ಮಾತ್ರ ಆರ್ಥಿಕವಾಗಿ ಸಬಲರಾಗಿದ್ದು, ಶೇ. ೯೦ ರಷ್ಟು ಮಂದಿ ಶೈಕ್ಷಣಿಕವಾಗಿ ಹಿಂದುಳಿದಿದ್ದಾರೆ. ತಾಲ್ಲೂಕಿನಲ್ಲಿ ಸಮುದಾಯದ ಮಕ್ಕಳು ಉನ್ನತ ವ್ಯಾಸಂಗ ಮಾಡಲು ಅನುಕೂಲವಾಗುವಂತೆ ಕೇಂದ್ರ ಸರ್ಕಾರದ ಏಕಲವ್ಯ ಶಾಲೆಯನ್ನು ಮಂಜೂರು ಮಾಡಿಸಬೇಕು ಎಂದು ಸಂಸದ ಕೆ.ಹೆಚ್.ಮುನಿಯಪ್ಪ ಅವರಲ್ಲಿ ಮನವಿ ಮಾಡಿದರು.
ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ, ಚಿಕ್ಕಬಳ್ಳಾಪುರ ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷ ಮುನಿಕೃಷ್ಣಪ್ಪ, ಜಿಲ್ಲಾ ಪಂಚಾಯತಿ ಸದಸ್ಯ ಸತೀಶ್, ಎನ್.ಮುನಿಯಪ್ಪ, ಯರ್ರಬಚ್ಚಪ್ಪ, ಶ್ರೀರಾಮರೆಡ್ಡಿ, ಪಿ.ಎಲ್.ಡಿ.ಬ್ಯಾಂಕ್ ನಿರ್ದೇಶಕ ಅಶ್ವಥ್ಥರೆಡ್ಡಿ, ತಲಕಾಯಲಬೆಟ್ಟ ಗ್ರಾಮ ಪಂಚಾಯತಿ ಅಧ್ಯಕ್ಷ ಶ್ರೀನಿವಾಸರೆಡ್ಡಿ, ಉಪಾಧ್ಯಕ್ಷೆ ಗಾಯಿತ್ರಿ, ದಿಬ್ಬೂರಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷ ಸುಬ್ಬಣ್ಣ, ಶಿವಮೊಗ್ಗ ಕೆನರಾ ಬ್ಯಾಂಕ್ ವ್ಯವಸ್ಥಾಪಕ ಎಂ.ನಾರಾಯಣಪ್ಪ, ಪ್ರಸನ್ನ, ಭೂ ಅಭಿವೃದ್ಧಿ ನ್ಯಾಯ ಮಂಡಳಿ ಮಾಜಿ ಸದಸ್ಯ ನಾರಾಯಣಸ್ವಾಮಿ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.