ರಾಜ್ಯದಲ್ಲೇ ಅತಿ ದೊಡ್ಡ ರೇಷ್ಮೆ ಗೂಡಿನ ಮಾರುಕಟ್ಟೆಯೆಂದೇ ಪ್ರಸಿದ್ಧವಾದ ನಗರದ ರೇಷ್ಮೆ ಗೂಡಿನ ಮಾರುಕಟ್ಟೆ ಆರು ದಿನಗಳಿಂದ ರೀಲರುಗಳು ನಡೆಸುತ್ತಿರುವ ಮುಷ್ಕರದಿಂದ ಸ್ಥಗಿತಗೊಂಡಿದೆ. ರೇಷ್ಮೆ ಗೂಡಿನ ಹರಾಜು ನಡೆಯದೆ ರೈತರಿಗೆ ಅನ್ಯಾಯವಾಗುತ್ತಿದ್ದು, ತಕ್ಷಣ ಅಧಿಕಾರಿಗಳು ಮಧ್ಯ ಪ್ರವೇಶಿಸಿ ಕ್ರಮ ಕೈಗೊಳ್ಳಬೇಕೆಂದು ಶನಿವಾರ ರೈತ ಸಂಘದ ಸದಸ್ಯರು ಆಗ್ರಹಿಸಿದರು.
ಪ್ರತಿ ದಿನ ಕೋಟ್ಯಾಂತರ ವ್ಯವಹಾರ ನಡೆಸುತ್ತಿದ್ದ ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ಈಗ ರೀಲರುಗಳು ಇ–ಹರಾಜು ನಿಲ್ಲಿಸಲು ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿರುವುದರಿಂದ ವ್ಯವಹಾರಗಳು ನಿಂತಿವೆ. ರೈತರು ಬೇರೆ ಗೂಡಿನ ಮಾರುಕಟ್ಟೆಗೆ ಹೋಗುತ್ತಿದ್ದರೂ ರೇಷ್ಮೆ ಗೂಡಿನ ಬೆಲೆ ಕುಸಿದಿದ್ದು, ಕಡಿಮೆ ಬೆಲೆಗೆ ಮಾರಾಟ ಮಾಡುವ ಪರಿಸ್ಥಿತಿ ಉಂಟಾಗಿದೆ. ಸರ್ಕಾರಕ್ಕೂ ಸಾಕಷ್ಟು ನಷ್ಟವಾಗುತ್ತಿರುವುದರಿಂದ ರೇಷ್ಮೆ ಸಚಿವರು ಮತ್ತು ಆಯುಕ್ತರು ಸ್ಥಳೀಯ ಸಮಸ್ಯೆಗಳನ್ನು ಪರಿಹರಿಸಬೇಕು. ರೈತರಿಗೆ ಆಗುತ್ತಿರುವ ನಷ್ಟವನ್ನು ಸರ್ಕಾರ ಭರಿಸಬೇಕು, ರೇಷ್ಮೆ ಗೂಡುಗಳನ್ನು ಸರ್ಕಾರವೇ ಖರೀದಿಸಲು ಮುಂದಾಗಬೇಕು. ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ಹರಾಜು ಪ್ರಕ್ರಿಯೆಯನ್ನು ಪ್ರಾರಂಭಿಸಲು ಬೇಕಾದ ಕ್ರಮಗಳನ್ನು ಕೈಗೊಳ್ಳದಿದ್ದಲ್ಲಿ ಸಂಘಟನೆಯಿಂದ ಉಗ್ರವಾದ ಹೋರಾಟವನ್ನು ನಡೆಸುವುದಾಗಿ ಎಚ್ಚರಿಕೆ ನೀಡಿದರು.
ರೇಷ್ಮೆ ಇಲಾಖೆ ಜಂಟಿ ನಿರ್ದೇಶಕ ಪ್ರಭಾಕರ್ ಅವರಿಗೆ ರೈತ ಸಂಘದ ಸದಸ್ಯರು ಮನವಿಯನ್ನು ಸಲ್ಲಿಸಿದರು.
ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯ ಜಿಲ್ಲಾಧ್ಯಕ್ಷ ಟಿ.ಲಕ್ಷ್ಮೀನಾರಾಯಣರೆಡ್ಡಿ, ತಾಲ್ಲೂಕು ಅಧ್ಯಕ್ಷ ರವಿಪ್ರಕಾಶ್, ಮಹಿಳಾ ಘಟಕದ ಅನಸೂಯಮ್ಮ, ಪಾರ್ವತಮ್ಮ, ಸಂಪತ್ಕುಮಾರ್, ನಾರಾಯಣಸ್ವಾಮಿ, ನರೇಂದ್ರ, ಭಕ್ತರಹಳ್ಳಿ ಪ್ರತೀಶ್, ಹುಸೇನ್ ಸಾಬ್, ಜೆ.ಎಸ್.ವೆಂಕಟಸ್ವಾಮಿ, ಎಸ್.ಎಂ.ಗೋವಿಂದಪ್ಪ, ಮುನಿಕೆಂಪಣ್ಣ, ಮಾರಪ್ಪ, ನಾಗೇಶ, ರಮೇಶ, ಶಂಕರಣ್ಣ, ಮುರಳಿ, ಪುರುಷೋತ್ತಮ, ನಾರಾಯಣಸ್ವಾಮಿ, ಬಾಜಿಸಾಬ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.