ನಗರದ ರೇಷ್ಮೆ ಗೂಡು ಮಾರುಕಟ್ಟೆಗೆ ಬುಧವಾರ ಕೇಂದ್ರ ರೇಷ್ಮೆ ಮಂಡಳಿಯ ಅಧಿಕಾರಿಗಳು ಬೇಟಿ ನೀಡಿ ಪರಿಶೀಲನೆ ನಡೆಸಿದರು.
ಕಳೆದ ಮಾರ್ಚ್ ಏಪ್ರಿಲ್ ತಿಂಗಳಿನಲ್ಲಿ ಕೇಂದ್ರ ಸರ್ಕಾರ ಚೀನಾ ರೇಷ್ಮೆ ಆಮುದು ಸುಂಕವನ್ನು ಇಳಿಕೆ ಮಾಡಿದ್ದರ ಪರಿಣಾಮವಾಗಿ ದಿಡೀರನೆ ಕುಸಿದಿದ್ದ ಗೂಡಿನ ಬೆಲೆಗಳಿಂದಾಗಿ ರೈತರು ಕಂಗೆಟ್ಟಿದ್ದ ಹಿನ್ನೆಲೆಯಲ್ಲಿ ಆಗಮಿಸಿದ್ದ ಅಧಿಕಾರಿಗಳ ತಂಡ ಪರಿಶೀಲನೆ ನಡೆಸಿದರು.
ರೇಷ್ಮೆ ಗೂಡಿನ ಉತ್ಪಾದನೆ, ಮಾರುಕಟ್ಟೆಯಲ್ಲಿ ಹರಾಜು ಪ್ರಕ್ರಿಯೆ ನಡೆಯುವ ವಿಧಾನಗಳು, ರೈತರಿಗೆ ಯಾವ ಮಾದರಿಯಲ್ಲಿ ಗೂಡಿನ ಹಣವನ್ನು ತಲುಪಿಸಲಾಗುತ್ತಿದೆ ಎಂಬುದರ ಬಗ್ಗೆ ಉಪನಿರ್ದೇಶಕ ರತ್ನಯ್ಯಶೆಟ್ಟಿ ಅವರಿಂದ ಮಾಹಿತಿ ಪಡೆದ ನಂತರ ರೈತರನ್ನಾಗಲಿ, ರೀಲರುಗಳನ್ನಾಗಲಿ ಮಾತನಾಡಿಸದೆ, ತಮ್ಮ ಪಾಡಿಗೆ ತಾವು ಕಚೇರಿಯಲ್ಲಿ ಬಂದು ಕುಳಿತುಕೊಳ್ಳುತ್ತಿದ್ದಂತೆ ಧಾವಿಸಿ ಬಂದ ರೈತ ಮುಖಂಡ ಎಸ್.ಎಂ.ನಾರಾಯಣಸ್ವಾಮಿ ಹಾಗೂ ರೀಲರುಗಳು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಭಾಷೆಯ ಸಮಸ್ಯೆಯಿಂದಾಗಿ ರೈತರು ಹಾಗೂ ರೀಲರುಗಳು ಏನು ಮಾತನಾಡುತ್ತಿದ್ದಾರೆಂಬುದು ಅರ್ಥವಾಗದೆ, ಅಧಿಕಾರಿಗಳು ಏಕಾಏಕಿ ಕಚೇರಿಯಿಂದ ಹೊರಗೆ ಹೋದರು.
ಅಧಿಕಾರಿಗಳ ಈ ವರ್ತನೆಯಿಂದ ಕೆರಳಿದ ರೈತರು, ರೈತರ ಕಷ್ಟಗಳನ್ನು ವಿಚಾರಿಸದೆ, ಕಾಟಾಚಾರಕ್ಕೆ ಬಂದು ಬೇಟಿ ನೀಡಿ ಹೋಗುತ್ತಿದ್ದಾರೆ, ಮಧ್ಯವರ್ತಿಗಳು ಅವರನ್ನು ದಿಕ್ಕುತಪ್ಪಿಸುತ್ತಿದ್ದಾರೆ, ಉದ್ದೇಶಪೂರ್ವಕವಾಗಿಯೆ ಗೂಡು ಹರಾಜು ಕೂಗುವ ಸಂಧರ್ಭದಲ್ಲಿ ಮಾರುಕಟ್ಟೆಗೆ ಬೇಟಿ ನೀಡಿದ್ದಾರೆ. ರೀಲರುಗಳನ್ನು ಮಾತನಾಡಿಸಲಿಲ್ಲ, ರೈತರ ಸಮಸ್ಯೆಗಳನ್ನೂ ಆಲಿಸಲಿಲ್ಲವೆಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ತಕ್ಷಣ ಎಚ್ಚೆತ್ತುಕೊಂಡ ಕೆಲ ಅಧಿಕಾರಿಗಳು ಉಪನಿರ್ದೇಶಕರ ಕಚೇರಿಯಲ್ಲಿ ರೀಲರುಗಳನ್ನು ಹಾಗೂ ರೈತರನ್ನು ಸಮಾಧಾನಪಡಿಸುವ ಯತ್ನ ಮಾಡಿದರು, ಕೇಂದ್ರ ರೇಷ್ಮೆ ಮಂಡಳಿಯಿಂದ ಬಂದಿರುವ ಅಧಿಕಾರಿಗಳಿಗೆ ಇಲ್ಲಿನ ರೈತರ ಸಮಸ್ಯೆಗಳನ್ನು ಪರಿಹಾರ ಮಾಡುವಂತಹ ಅಧಿಕಾರವಿಲ್ಲ, ನಾವು ಕೊಟ್ಟಿರುವ ವರದಿಗಳಿಗೆ ಅನುಕೂಲವಾಗುವಂತೆ ಅವರಿಗೆ ಸನ್ನಿವೇಶಗಳನ್ನು ಮಾತ್ರ ತೋರಿಸುತ್ತಿದ್ದೇವೆ, ಎಲ್ಲಾ ರೈತರು ಒಂದೇ ಬಾರಿಗೆ ಮಾತನಾಡಿದರೆ, ಅವರಿಗೇನು ಅರ್ಥವಾಗದೆ, ರೈತರು, ಹಾಗೂ ರೀಲರುಗಳ ವಿರುದ್ಧವಾಗಿ ವರದಿಯನ್ನು ಕೊಡುತ್ತಾರೆ, ನಾವು ಬಂದಿರುವುದು ನಿಮ್ಮ ಅನುಕೂಲಕ್ಕೆ ನಮಗೆ ಸಹಕಾರ ನೀಡಿ ಎಂದು ಸಮಾಧಾನಪಡಿಸುವಂತಹ ಯತ್ನವನ್ನು ಮಾಡಿದರು.
ಅಧಿಕಾರಿಗಳು ರೈತರು ಹಾಗೂ ರೀಲರುಗಳ ಆಕ್ರೋಶ ವ್ಯಕ್ತಪಡಿಸುತ್ತಿದ್ದಂತೆ ತಕ್ಷಣ ಕಾರುಗಳಲ್ಲಿ ಹತ್ತಿ ಹೊರಟು ಹೋದರು.
- Advertisement -
- Advertisement -
- Advertisement -
- Advertisement -