ಸರ್ಕಾರದ ಭ್ರಷ್ಟಾಚಾರವನ್ನು ಪ್ರಶ್ನಿಸುವ ನೈತಿಕ ಸ್ಥೈರ್ಯವನ್ನು ಯುವಜನರು ಮೈಗೂಡಿಸಿಕೊಳ್ಳಬೇಕು. ಸಮಸ್ಯೆಯನ್ನು ಬಗೆಹರಿಸಲು ಜನರು ಒಗ್ಗೂಡಿ ಹೋರಾಡಬೇಕು ಎಂದು ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ತಿಳಿಸಿದರು.
ತಾಲ್ಲೂಕಿನ ಚೀಮಂಗಲ ಗ್ರಾಮದಲ್ಲಿ ಭಾನುವಾರ ಯಣ್ಣೂರಿನ ಜಾಗೃತಿ ಗ್ರಾಮೀಣ ಮತ್ತು ನಗರಾಭಿವೃದ್ಧಿ ಸಂಸ್ಥೆ ಹಾಗೂ ನೆಹರೂ ಯುವ ಕೇಂದ್ರದ ಸಂಯುಕ್ತಾಶ್ರಯದಲ್ಲಿ ನಡೆದ ಯುವಜನಾಂಗ ಸಂಘಗಳಿಗೆ ನೋಂದಣಿ ಪತ್ರ ಮತ್ತು ಕ್ರೀಡಾ ಸಾಮಗ್ರಿಗಳ ವಿತರಣಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸರ್ಕಾರ ಜನರ ಅನುಕೂಲಕ್ಕಾಗಿ ಇರಬೇಕು. ಭ್ರಷ್ಟಾಚಾರವನ್ನು ಪ್ರೋತ್ಸಾಹಿಸುವ ಸರ್ಕಾರಕ್ಕೆ ಬೆಂಬಲಿಸದಿರಿ. ಆಸೆ, ಆಮಿಷಗಳಿಗೆ ಬಲಿಯಾಗದೇ ಕೇವಲ ಅಭಿವೃದ್ಧಿಯೇ ಮಂತ್ರವಾಗಲಿ. ಬಡ ಬಗ್ಗರಿಗೆ ಅನುಕೂಲ ಕಲ್ಪಿಸುವ, ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಕಲ್ಪಿಸುವ ಸರ್ಕಾರ ಮಾತ್ರ ಇರಲಿ ಎಂಬ ಸಾಮಾಜಿಕ ಆಲೋಚನೆ ಪ್ರತಿಯೊಬ್ಬರಲ್ಲೂ ಬರಬೇಕು ಎಂದರು.
ನಿವೃತ್ತ ಸರ್ವೋಚ್ಛ ನ್ಯಾಯಾಲಯದ ನ್ಯಾಯಾಧೀಶರು ಹಾಗೂ ನಿವೃತ್ತ ಲೋಕಾಯುಕ್ತರಾದ ಎನ್.ಸಂತೋಷ್ ಹೆಗ್ಡೆ ಮಾತನಾಡಿ, ಜನಪ್ರತಿನಿಧಿಗಳಾದವರು ಲೋಕಸಭೆಯಲ್ಲಾಗಲಿ, ರಾಜ್ಯಸಭೆಗಳಲ್ಲಾಗಲೀ ಜನರ ಸಮಸ್ಯೆಗಳನ್ನು, ನಾಡಿನ ಅಭಿವೃದ್ಧಿ ಸಂಬಂಧಿ ವಿಚಾರಗಳನ್ನು ಚರ್ಚಿಸಬೇಕಾದದ್ದು ಅವರ ಕರ್ತವ್ಯ. ಸಾಕಷ್ಟು ಮಂದಿ ಅವರ ಕರ್ತವ್ಯವವನ್ನು ನಿರ್ವಹಿಸುತ್ತಿಲ್ಲ. ಅಭಿವೃದ್ಧಿ, ಸಮಸ್ಯೆ ನಿವಾರಣೆ, ಭ್ರಷ್ಟಾಚಾರ ತಡೆ ಮುಂತಾದ ವಿಚಾರಗಳ ಬಗ್ಗೆ ಜನರು ಜನಪ್ರತಿನಿಧಿಗಳನ್ನು ಎಚ್ಚರಿಸುವ ಅಗತ್ಯವಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕ್ರೀಡಾಸಾಮಗ್ರಿಗಳನ್ನು ಯುವಕರ ಸಂಘಗಳಿಗೆ ವಿತರಿಸಲಾಯಿತು. ಜಾನಪದ ಹುಂಜ ಜಿ.ಮುನಿರೆಡ್ಡಿ ಮತ್ತು ತಂಡದವರು ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ಶಿಕ್ಷಕಿ ಹಸೀನಾ ಬೇಗಂ, ಯುವಜನ ಕಾರ್ಯ ಮತ್ತು ಕ್ರೀಡಾ ಸಚಿವಾಲಯ ಸಲಹಾ ಸಮಿತಿ ಅಧ್ಯಕ್ಷ ಟಿ.ಎಸ್.ಭಾಸ್ಕರ್ ರೆಡ್ಡಿ, ಜಾಗೃತಿ ಸಂಸ್ಥೆಯ ಅಧ್ಯಕ್ಷ ಎಂ.ವೆಂಕಟ್, ಕಾರ್ಯದರ್ಶಿ ಆರ್.ರಾಮಕೃಷ್ಣಪ್ಪ, ದೊಣ್ಣಹಳ್ಳಿ ರಾಮಣ್ಣ, ಡಾ. ಎಂ.ಸಿ.ಪ್ರಭುದೇವ್, ಜಿ.ಇ.ನಾರಾಯಣಗೌಡ, ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.
- Advertisement -
- Advertisement -
- Advertisement -
- Advertisement -