Home News ಬೆಂಕಿ ಅವಘಡದಲ್ಲಿ ಮರಣ ಹೊಂದಿದ ಕುರಿ ಮಾಲೀಕರಿಗೆ ಪರಿಹಾರಧನ

ಬೆಂಕಿ ಅವಘಡದಲ್ಲಿ ಮರಣ ಹೊಂದಿದ ಕುರಿ ಮಾಲೀಕರಿಗೆ ಪರಿಹಾರಧನ

0

ತಾಲ್ಲೂಕಿನ ಯರ್ರನಾಗೇನಹಳ್ಳಿ ಗ್ರಾಮದಲ್ಲಿ ಕಳೆದ ತಿಂಗಳು ಬೆಂಕಿ ಅನಾಹುತಕ್ಕೆ ಸಿಕ್ಕು ಮೃತಪಟ್ಟಿದ್ದ ಕುರಿಗಳ ಮಾಲೀಕರಿಗೆ ಪ್ರಗತಿಪರ ಕುರಿ ಸಾಕಾಣಿಕೆದಾರರ ಸಹಕಾರ ಸಂಘದ ಅಧ್ಯಕ್ಷ ಸಿ.ವಿ. ಲೋಕೇಶ್‌ಗೌಡ ಮಂಗಳವಾರ ಒಂದು ಲಕ್ಷದ ಚೆಕ್‌ ನೀಡಿದರು.
ತಾಲ್ಲೂಕಿನ ದಿಬ್ಬೂರಹಳ್ಳಿ ಪೊಲೀಸ್‌ ಠಾಣೆಯ ವ್ಯಾಪ್ತಿಯ ಎಸ್‌.ದೇವಗಾನಹಳ್ಳಿ ಗ್ರಾಮ ಪಂಚಾಯಿತಿಯ ಯರ್ರನಾಗೇನಹಳ್ಳಿ ಗ್ರಾಮದಲ್ಲಿ ಕಳೆದ ತಿಂಗಳಲ್ಲಿ ನಾಲ್ಕು ಗುಡಿಸಲುಗಳಿಗೆ ಆಕಸ್ಮಿಕವಾಗಿ ಬೆಂಕಿ ಬಿದ್ದು 20 ಕುರಿಗಳು, ಒಂದು ಎತ್ತು ಸ್ಥಳದಲ್ಲೇ ದಹನವಾಗಿ ಮತ್ತೊಂದು ಎತ್ತು ಮತ್ತು ಇಬ್ಬರಿಗೆ ತೀವ್ರ ಗಾಯಗಳಾಗಿದ್ದವು. ಗುಡಿಸಿಲಿನಲ್ಲೆ ಮಲಗಿದ್ದ ವೆಂಕಟರಮಣಪ್ಪ (೬೦) ಮತ್ತು ರಕ್ಷಣೆಗೆ ಬಂದ ಆತನ ಮಗ ಗಣೇಶ್(೩೫) ತೀವ್ರ ಸುಟ್ಟಗಾಯಗಳಿಂದ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದರು.
ಬೆಂಕಿ ಅವಘಡದಲ್ಲಿ ಮರಣ ಹೊಂದಿದ ಕುರಿ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದ ಪ್ರಗತಿಪರ ಕುರಿ ಸಾಕಾಣಿಕೆದಾರರ ಸಹಕಾರ ಸಂಘದ ಅಧ್ಯಕ್ಷ ಸಿ.ವಿ. ಲೋಕೇಶ್‌ಗೌಡ ವೆಂಕಟರಮಣಪ್ಪ ಮತ್ತು ಅವರ ಮಗ ಗಣೇಶ್‌ ಅವರಿಗೆ ಸಾಂತ್ವನ ಹೇಳಿ, ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ವತಿಯಿಂದ ಮರಣ ಹೊಂದಿದ ಕುರಿಗಳಿಗೆ ಪರಿಹಾರಧನ ವಿತರಣೆಗೆ ಅಗತ್ಯ ಕ್ರಮಕೊಳ್ಳುವುದಾಗಿ ತಿಳಿಸಿದ್ದರು.
‘ಕುರಿಗಳನ್ನು ನಂಬಿ ಜೀವನ ನಡೆಸುತ್ತಿದ್ದ ವೆಂಕಟರಮಣಪ್ಪ ಮತ್ತು ಕುಟುಂಬದವರು ಬೆಂಕಿ ಅನಾಹುತದಿಂದ ಅಪಾರ ನಷ್ಟವನ್ನುಂಟಾಗಿದೆ. ಅದಕ್ಕಾಗಿ ರಾಜ್ಯ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಬಿ. ಮುನಿವೆಂಕಟಪ್ಪ ಅವರನ್ನು ಭೇಟಿ ಮಾಡಿ ವಿಷಯವನ್ನು ಪ್ರಸ್ತಾಪಿಸಿ, ಮೃತಪಟ್ಟ ಒಂದು ಕುರಿಗೆ 5 ಸಾವಿರ ರೂಗಳಂತೆ ಪರಿಹಾರಧನವನ್ನು ಘಟನೆ ನಡೆದ ಕೆಲವೇ ದಿನಗಳಲ್ಲಿ ನೀಡುತ್ತಿದ್ದೇವೆ. ಈ ಹಣವನ್ನು ಕುರಿ ಸಾಕಾಣಿಕೆಗೆ ಬಳಸಿಕೊಂಡು ಆರ್ಥಿಕವಾಗಿ ಸದೃಢರಾಗಬೇಕೆಂಬುದು ನಿಗಮದ ಉದ್ದೇಶವಾಗಿದೆ’ ಎಂದು ಪ್ರಗತಿಪರ ಕುರಿ ಸಾಕಾಣಿಕೆದಾರರ ಸಹಕಾರ ಸಂಘದ ಅಧ್ಯಕ್ಷ ಸಿ.ವಿ. ಲೋಕೇಶ್‌ಗೌಡ ತಿಳಿಸಿದರು.
ನರಸಿಂಹರೆಡ್ಡಿ, ಗಣೇಶ್‌ ಈ ಸಂದರ್ಭದಲ್ಲಿ ಹಾಜರಿದ್ದರು.