Home News ನಗರಸಭೆ ಅಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯ ಸಭೆ ಕರೆಯಲು ಒತ್ತಾಯ

ನಗರಸಭೆ ಅಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯ ಸಭೆ ಕರೆಯಲು ಒತ್ತಾಯ

0

ನಗರಸಭೆ ಅಧ್ಯಕ್ಷ ಅಫ್ಸರ್ಪಾಷ ಅವರ ವಿರುದ್ಧ ಅವಿಶ್ವಾಸ ಮಂಡಿಸುವ ಕಾರ್ಯಕ್ಕೆ ಶುಕ್ರವಾರ ಅಧಿಕೃತ ಚಾಲನೆ ದೊರೆತಿದೆ.
ಪ್ರಸ್ತುತ ೨೭ ಮಂದಿ ಸದಸ್ಯರನ್ನು ಹೊಂದಿರುವ ಶಿಡ್ಲಘಟ್ಟ ನಗರಸಭೆಯಲ್ಲಿ ಅಧ್ಯಕ್ಷರ ವಿರುದ್ದ ಅವಿಶ್ವಾಸ ವ್ಯಕ್ತ ಪಡಿಸಿ ೨೧ ಮಂದಿ ಸಹಿ ಮಾಡಿರುವ ಪತ್ರವನ್ನು ಪೌರಾಯುಕ್ತ ಚಲಪತಿ ಯವರಿಗೆ ನೀಡುವ ಮೂಲಕ ನಗರಸಭೆ ಅಧ್ಯಕ್ಷರ ಸ್ಥಾನಕ್ಕೆ ಬೇರೊಬ್ಬರನ್ನು ತರುವ ಕಾರ್ಯ ಶುರುವಾಗಿದೆ.
ಸೆಪ್ಟೆಂಬರ್ ೧೬ ರ ಶನಿವಾರಕ್ಕೆ ಒಂದು ವರ್ಷ ಪೂರೈಸಲಿರುವ ನಗರಸಭೆ ಅಧ್ಯಕ್ಷ ಅಪ್ಸರ್ಪಾಷ ಅವರು ನಮಗೆ ಬೇಡ ಎಂದಿರುವ ಸದಸ್ಯರು ಕೂಡಲೇ ಅವಿಶ್ವಾಸ ನಿರ್ಣಯ ಸಭೆ ಕರೆಯುವಂತೆ ಒತ್ತಾಯಿಸಿದ್ದಾರೆ.

ಶಿಡ್ಲಘಟ್ಟದ ನಗರಸಭೆ ಅಧ್ಯಕ್ಷರ ವಿರುದ್ಧ ಅವಿಶ್ವಾಸ ವ್ಯಕ್ತ ಪಡಿಸಿ ಕೂಡಲೇ ಅವಿಶ್ವಾಸ ನಿರ್ಣಯ ಮಂಡಿಸಲು ಸಭೆ ಕರೆಯುವಂತೆ ಒತ್ತಾಯಿಸಿ ನಗರಸಭೆಯ ೨೧ ಮಂದಿ ಸದಸ್ಯರು ಸಹಿ ಹಾಕಿರುವ ಮನವಿ ಪತ್ರವನ್ನು ಶುಕ್ರವಾರ ನಗರಸಭೆ ಆಯುಕ್ತ ಚಲಪತಿ ಅವರಿಗೆ ಸದಸ್ಯರು ಸಲ್ಲಿಸಿದರು.

ನಗರಸಭೆ ಪಕ್ಷಗಳ ಬಲಾಬಲ: ನಗರಸಭೆಯ ಒಟ್ಟು ೨೭ ವಾರ್ಡ್ಗಳ ಪೈಕಿ ಕಾಂಗ್ರೆಸ್ ೧೪ ಸ್ಥಾನಗಳಲ್ಲಿ ಜಯಗಳಿಸಿದ್ದರೆ ಜೆಡಿಎಸ್ ೧೧ ಸ್ಥಾನಗಳಲ್ಲಿ ಬಿಜೆಪಿ ಹಾಗು ಪಕ್ಷೇತರ ತಲಾ ಒಂದು ಸ್ಥಾನಗಳಲ್ಲಿ ಜಯಗಳಿಸಿತ್ತು.
ಮೊದಲನೆ ಅವಧಿಗೆ ಅಧ್ಯಕ್ಷರಾಗಿ ಕಾಂಗ್ರೆಸ್ನ ಮುಷ್ಠರಿತನ್ವೀರ್, ಉಪಾಧ್ಯಕ್ಷರಾಗಿ ಜೆಡಿಎಸ್ನ ಸುಮಿತ್ರರಮೇಶ್ ಆಯ್ಕೆಯಾಗಿದ್ದರು. ೩೦ ತಿಂಗಳ ನಂತರ ಎರಡನೇ ಅವಧಿಗೆ ೨೦1೬ ರ ಸೆಪ್ಟೆಂಬರ್ ೧೬ ರಂದು ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಸದಸ್ಯರ ಅಡ್ಡಮತದಾನದಿಂದ ಜೆಡಿಎಸ್ ನ ಅಫ್ಸರ್ಪಾಷ ಅಧ್ಯಕ್ಷರಾಗಿ ಜೆಡಿಎಸ್ ನ ಪ್ರಭಾವತಿ ಸುರೇಶ್ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದರು.
ಆದರೆ ನಂತರದ ದಿನಗಳಲ್ಲಿ ಪಕ್ಷದ ವಿಪ್ ಉಲ್ಲಂಘಿಸಿ ಜೆಡಿಎಸ್ ಪರವಾಗಿ ಮತ ಚಲಾಯಿಸಿದ ನಾಲ್ವರು ನಗರಸಭೆ ಸದಸ್ಯರ ಸದಸ್ಯತ್ವ ರದ್ದುಗೊಳಿಸಿ ಜಿಲ್ಲಾಧಿಕಾರಿ ಆದೇಶಿಸಿದ್ದರ ಹಿನ್ನಲೆಯಲ್ಲಿ ಕಾಂಗ್ರೆಸ್ ಸದಸ್ಯರ ಸಂಖ್ಯೆ ೧೦ ಕ್ಕೆ ಇಳಿದಿತ್ತು. ಅದರಲ್ಲಿ ಓರ್ವ ಸದಸ್ಯರು ಇತ್ತೀಚೆಗೆ ಕಾಂಗ್ರೆಸ್ ತೊರೆದು ಜೆಡಿಎಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದಾರೆ ಹಾಗಾಗಿ ಕಾಂಗ್ರೆಸ್ನ ಸದಸ್ಯರ ಸಂಖ್ಯೆ ೯ ಕ್ಕೆ ಇಳಿದಿದೆ.
ಇನ್ನು ಜೆಡಿಎಸ್ ಸದಸ್ಯರ ಪೈಕಿ ಅಧ್ಯಕ್ಷ ಅಫ್ಸರ್ಪಾಷ ಹೊರತುಪಡಿಸಿ ಉಳಿದೆಲ್ಲಾ ೧೦ ಸದಸ್ಯರೂ ಸೇರಿದಂತೆ ಕಾಂಗ್ರೆಸ್ನ ೯ ಸದಸ್ಯರು ಹಾಗು ಬಿಜೆಪಿ ಹಾಗು ಪಕ್ಷೇತರ ಅಭ್ಯರ್ಥಿಗಳು ಅವಿಶ್ವಾಸ ವ್ಕಕ್ತಪಡಿಸಿ ಮನವಿ ಪತ್ರದಲ್ಲಿ ಸಹಿ ಹಾಕಿದ್ದಾರೆ.
ಅಭಿವೃದ್ಧಿಗಿಂತ ಅಧಿಕಾರಕ್ಕಾಗಿ ಕಿತ್ತಾಟ: ನಗರಸಭೆಯ ಈ ಆಡಳಿತ ಮಂಡಳಿ ಅಧಿಕಾರಕ್ಕಾಗಿ ಬಂದಾಗಿನಿಂದಲೂ ನಗರದ ಅಭಿವೃದ್ಧಿಗಿಂತ ಹೆಚ್ಚು ಅಧಿಕಾರಕ್ಕಾಗಿ ನಡೆಸಿದ ಕಚ್ಚಾಟಗಳೇ ಹೆಚ್ಚು ಸುದ್ದಿಯಾಗಿವೆ. ಇಲ್ಲಿ ಶತ್ರುಗಳಾರು? ಸ್ನೇಹಿತರಾರು? ಯಾರು ಯಾರೊಂದಿಗಿದ್ದಾರೆ? ಎನ್ನುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಅವಿಶ್ವಾಸಕ್ಕೆ ಮುಖ್ಯ ಕಾರಣ: ಅಫ್ಸರ್ಪಾಷ ಅಧ್ಯಕ್ಷರಾದ ಒಂದು ವರ್ಷದ ಅವಧಿಯಲ್ಲಿ ಎಲ್ಲಾ ಸದಸ್ಯರನ್ನು ಒಗ್ಗೂಡಿಸಿಕೊಂಡು ಹೋಗುವಲ್ಲಿ ವಿಫಲವಾಗಿರುವುದೂ ಸೇರಿದಂತೆ ತಮ್ಮ ಏಕಪಕ್ಷೀಯ ನಿರ್ಧಾರದಿಂದ ಬಹುತೇಕ ಸದಸ್ಯರ ಸಿಟ್ಟಿಗೆ ಗುರಿಯಾಗಿದ್ದರು. ಸಾಮಾನ್ಯ ಸಭೆ ಸೇರಿದಂತೆ ತುರ್ತು ಸಭೆಯ ವೇಳೆ ಯಾವುದೇ ಸದಸ್ಯರನ್ನು ಗಣನೆಗೆ ತೆಗೆದುಕೊಳ್ಳದೇ ತಾವು ಹೇಳಿದ್ದೇ ನಡೆಯಬೇಕು ಎನ್ನುವ ನಿಟ್ಟಿನಲ್ಲಿ ನಡೆದುಕೊಂಡಿರುವುದಕ್ಕೆ ಕಳೆದ ಸಭೆಯಲ್ಲಿ ೨೫ ಅಂಶಗಳನ್ನು ಚರ್ಚಿಸುವವರೆಗೂ ಸಭೆಯಲ್ಲಿದ್ದ ಅಧ್ಯಕ್ಷ ಉಪಾಧ್ಯಕ್ಷರು ಕೊನೆಯ ಅಂಶವಾದ ಸ್ಥಾಯಿ ಸಮಿತಿ ಅಧ್ಯಕ್ಷರ ಆಯ್ಕೆ ವಿಚಾರ ಬಂದಾಗ ಊಟದ ನೆಪವೊಡ್ಡಿ ಸಭೆಯಿಂದ ಹೊರ ಹೋದದ್ದು ಬಹುತೇಕ ಸದಸ್ಯರ ಕೆಂಗಣ್ಣಿಗೆ ಕಾರಣವಾಯಿತು.
ಏಕಾಂಗಿಯಾದ ನಗರಸಭೆ ಅಧ್ಯಕ್ಷ: ಕಳೆದ ೨೦೧೬ ರ ಸೆಪ್ಟೆಂಬರ್೧೬ ರಂದು ನಗರಸಭೆಯ ಅಧ್ಯಕ್ಷರಾಗಿ ಆಯ್ಕೆಯಾದ ಅಫ್ಸರ್ಪಾಷರ ಹಿಂದೆ ಸುಮಾರು ೧೭ ಮಂದಿ ಸದಸ್ಯರಿದ್ದರು. ಸತತವಾಗಿ ನಾಲ್ಕು ಭಾರಿ ನಗರಸಭೆ ಸದಸ್ಯರಾಗಿ ಆಯ್ಕೆಯಾಗಿದ್ದ ಅಫ್ಸರ್ಪಾಷ ಜೆಡಿಎಸ್ ಪಕ್ಷದ ಹಿರಿಯ ಕಾರ್ಯಕರ್ತರೂ ಆಗಿದ್ದರು. ಆದರೆ ಅಧ್ಯಕ್ಷರಾಗಿ ಆಯ್ಕೆಯಾಗಿ ಅಧಿಕಾರಕ್ಕೆ ಬಂದ ಮೇಲೆ ಬಹುತೇಕ ಆತ್ಮೀಯ ಸದಸ್ಯರನ್ನು ಸೇರಿದಂತೆ ತಮ್ಮನ್ನು ಅಧ್ಯಕ್ಷರನ್ನಾಗಿಸಲು ದುಡಿದ ಬಹುತೇಕರನ್ನು ದೂರವಿಟ್ಟು ಅಧಿಕಾರ ಚಲಾಯಿಸಿದ ಹಿನ್ನಲೆಯಲ್ಲಿ ಇಂದು ಅಪ್ಸರ್ಪಾಷ ಏಕಾಂಗಿಯಾಗಿದ್ದಾರೆ.
ಅಧ್ಯಕ್ಷರ ವಿರುದ್ದ ಅವಿಶ್ವಾಸ ಮಂಡಿಸಿ ಸಹಿ ಹಾಕಿರುವ ಸದಸ್ಯರು: ನಗರದ ೧ ನೇ ವಾರ್ಡಿನ ಲಕ್ಷ್ಮಯ್ಯ, ೨ ನೇ ವಾರ್ಡಿನ ಜಬೀವುಲ್ಲಾ, ೩ ನೇ ವಾರ್ಡಿನ ಎಸ್.ರಾಘವೇಂದ್ರ, ೫ ನೇ ವಾರ್ಡಿನ ಪಿ.ಕೆ.ಕಿಶನ್, ೬ ನೇ ವಾರ್ಡಿನ ಎಂ.ವಿ.ವೆಂಕಟಸ್ವಾಮಿ, ೮ ನೇ ವಾರ್ಡಿನ ಸುಮಿತ್ರರಮೇಶ್, ೯ ನೇ ವಾರ್ಡಿನ ಚಿಕ್ಕಮುನಿಯಪ್ಪ, ೧೦ ನೇ ವಾರ್ಡಿನ ಜೆ.ಎಂ.ಬಾಲಕೃಷ್ಣ, ೧೧ ನೇ ವಾರ್ಡಿನ ಸಂಧ್ಯಾ ಮಂಜುನಾಥ್, ೧೨ ನೇ ವಾರ್ಡಿನ ಶಭಾನ ಮುನಾವರ್, ೧೩ ನೇ ವಾರ್ಡಿನ ಸರಳಾ ಶ್ರೀಧರ್, ೧೪ ನೇ ವಾರ್ಡಿನ ಶಾಹೀದಾಭಾನು, ೧೫ ನೇ ವಾರ್ಡಿನ ಪ್ರಭಾವತಿ ಸುರೇಶ್, ೧೭ ನೇ ವಾರ್ಡಿನ ಮುಷ್ಠರಿ ತನ್ವೀರ್ಪಾಷ, ೧೮ ನೇ ವಾರ್ಡಿನ ಇಲಿಯಾಜ್ಬೇಗ್, ೨೦ ನೇ ವಾರ್ಡಿನ ಶಫಿ,ಎಸ್, ೨೨ ನೇ ವಾರ್ಡಿನ ಕೇಶವಮೂರ್ತಿ, ೨೩ ನೇ ವಾರ್ಡಿನ ಸುನೀತಶ್ರೀನಾಥ್, ೨೪ ನೇ ವಾರ್ಡಿನ ಎಸ್.ಬಿ.ಬಾಬು, ೨೫ ನೇ ವಾರ್ಡಿನ ನಸ್ರೀನ್ತಾಜ್ ಮಹ್ಮದ್ ಅಲಿ, ೨೭ ನೇ ವಾರ್ಡಿನ ಪರ್ವಿನ್ ಸೈಯ್ಯದ್ಪಾಷ.