ಕರ್ನಾಟಕವನ್ನು ತಮಿಳುನಾಡಿನ ದಿಂಡಿಗಲ್ವರೆಗೂ ಹಾಗು ಕೇರಳದ ಗಡಿಯವರೆಗೂ ದೇಶವನ್ನು ವಿಸ್ತರಿಸಿ ಅನೇಕ ಪಾಳೇಗಾರರು ಆಳುತ್ತಿದ್ದ ಸಣ್ಣ ಸಣ್ಣ ಸಾಮ್ರಾಜ್ಯಗಳನ್ನು ಒಕ್ಕೂಟ ಮಾಡಿ ಅಖಂಡತೆಯನ್ನು ತಂದುಕೊಟ್ಟ ಕೀರ್ತಿ ಟಿಪ್ಪುಸುಲ್ತಾನ್ಗೆ ಸಲ್ಲುತ್ತದೆ ಎಂದು ಸೈಯ್ಯದ್ ಯೂಸುಫ್ ಹೇಳಿದರು.
ನಗರದ ತಾಲೂಕು ಕಛೇರಿ ಮುಂಭಾಗದಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ನಗರಸಭೆ ಸಹಯೋಗದಲ್ಲಿ ಏರ್ಪಡಿಸಲಾಗಿದ್ದ ಟಿಪ್ಪುಸುಲ್ತಾನ್ ಜಯಂತಿ ಮಹೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಭಾಗವಹಿಸಿ ಮಾತನಾಡಿದರು.
ವಿವಿಧ ಧರ್ಮಗಳ ರಾಜರು ಭಾರತದಲ್ಲಿ ಆಳ್ವಿಕೆ ಮಾಡಿದ್ದು ಉತ್ತಮವಾಗಿ ಕೆಲಸವನ್ನು ಮಾಡಿದ ಅನೇಕರ ಹೆಸರುಗಳು ಇಂದಿಗೂ ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ. ಅವುಗಳಲ್ಲಿ ಟಿಪ್ಪುಸುಲ್ತಾನ್ ಸಹ ಒಬ್ಬರು ಎಂದರು. ಇನ್ನು ಈ ಭಾಗದ ರೈತರ ಜೀವನಾಡಿಯಾಗಿರುವ ರೇಷ್ಮೆ ಬೆಳೆಯನ್ನು ಪರಿಚಯಿಸಿದ್ದು ಇದೇ ಟಿಪ್ಪುಸುಲ್ತಾನ್ ಹಾಗಾಗಿ ಈ ಭಾಗದ ಜನ ಅವರನ್ನು ಸದಾ ಸ್ಮರಿಸಬೇಕು ಎಂದರು.
ಇಡೀ ಭಾರತವಷ್ಟೇ ಅಲ್ಲದೇ ಇಡೀ ವಿಶ್ವದ ಇತಿಹಾಸದಲ್ಲಿ ದೇಶಕ್ಕೋಸ್ಕರ ತಮ್ಮ ಸ್ವಂತ ಮಕ್ಕಳನ್ನು ಒತ್ತೆಯಿಟ್ಟು ಸಾಯುವ ತನಕ ಹೋರಾಡಿ ಹುತಾತ್ಮರಾದಂತಹ ರಾಜ ಇನ್ನೊಬ್ಬರಿದ್ದರೆ ಯಾರಾದರೂ ಸಾಬಿತುಪಡಿಸಲಿ ಎಂದರು.
ಇಂತಹ ಒಬ್ಬ ರಾಜ ಕೆಲವರಿಗೆ ದೇಶದ್ರೋಹಿಯಾಗಿ ಕಾಣುತ್ತಾನೆ. ದೇಶದ್ರೋಹಿ, ದೇಶಪ್ರೇಮಿ ಎಂಬುದನ್ನು ಕೇವಲ ಒಂದು ಜಾತಿಯನ್ನು ನೋಡಿ ಗುರುತಿಸುವುದಾದರೆ ಬಹುಶಃ ಅದರಂತಹ ದುರಂತ ಇನ್ನೊಂದಿಲ್ಲ. ಎಂದರು.
ಮೊಟ್ಟಮೊದಲು ಯುದ್ಧದಲ್ಲಿ ಕ್ಷಿಪಣಿಯ ಪ್ರಯೋಗಿಸಿದ್ದ ಎಂಬ ಕಾರಣಕ್ಕೆ ಅಮೆರಿಕಾದ ಬಾಹ್ಯಾಕಾಶ ಸಂಸ್ಥೆಯವರು ಟಿಪ್ಪುವಿನ ಭಾವಚಿತ್ರವನ್ನು ಪ್ರದರ್ಶಿಸಿದ್ದಾರೆ. ಆದರೆ ದೇಶಕ್ಕಾಗಿ ಹೋರಾಡಿ ಮಡಿದ ಟಿಪ್ಪು ಸುಲ್ತಾನ್ ಭಾವಚಿತ್ರವೇ ನಮ್ಮಲ್ಲಿಲ್ಲದಿರುವುದು ದೊಡ್ಡ ದುರಂತ ಎಂದ ಅವರು ಎರಡನೇ ವರ್ಷದ ಟಿಪ್ಪುಸುಲ್ತಾನ್ ಜಯಂತಿಯನ್ನು ಸರಕಾರದ ವತಿಯಿಂದ ಆಚರಿಸುತ್ತಿರುವುದಕ್ಕೆ ಅಭಿನಂದನೆ ಸಲ್ಲಿಸಿದರು.
ಶಾಸಕ ಎಂ.ರಾಜಣ್ಣ ಮಾತನಾಡಿ ಪ್ರಜಾಪ್ರಭುತ್ವದ ಹೆಸರಿನಲ್ಲಿ ಸಂವಿಧಾನದ ಅಡಿಯಲ್ಲಿ ಬದುಕುತ್ತಿದ್ದೇವೆ. ಇಲ್ಲಿ ಎಲ್ಲಾ ಸಮುದಾಯಗಳಿಗೂ ಅವರದೇ ಆದ ಜಯಂತಿಗಳನ್ನು ಆಚರಿಸುವ ಹಕ್ಕಿರುವಂತೆ ಟಿಪ್ಪುಸುಲ್ತಾನ್ ಜಯಂತಿಯನ್ನು ಆಚರಿಸಲಾಗುತ್ತಿದೆ.
ಎಲ್ಲಾ ಜಾತಿ ಧರ್ಮಗಳವರು ಶಾಂತಿಯಿಂದ ಜೀವನ ನಡೆಸಬೇಕು ಎಂದ ಅವರು ನಾವೆಲ್ಲರೂ ಸೇರಿ ಸಮಾಜ ಕಟ್ಟುವ ಕೆಲಸಕ್ಕೆ ಮುಂದಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಸಮುದಾಯದ ವಿದ್ಯಾರ್ಥಿಗಳು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಜನಾಂಗದ ಮುಖಂಡರನ್ನು ಸನ್ಮಾನಿಸಿ ಗೌರವಿಸಲಾಯಿತು.
ತಹಸೀಲ್ದಾರ್ ಕೆ.ಎಂ.ಮನೋರಮಾ, ತಾ.ಪಂ ಇಓ ವೆಂಕಟೇಶ್, ನಗರಸಭೆ ಅಧ್ಯಕ್ಷ ಅಪ್ಸರ್ ಪಾಷ, ನಗರಸಭಾ ಆಯುಕ್ತ ಹೆಚ್.ಎ.ಹರೀಶ್, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್. ರಘುನಾಥರೆಡ್ಡಿ, ಆರಕ್ಷಕ ವೃತ್ತ ನಿರೀಕ್ಷಕ ವೆಂಕಟೇಶ್, ನಗರಸಭೆ ಸದಸ್ಯರಾದ ಸಿಕಂದರ್, ಶಫಿ, ಮುಖಂಡರಾದ ಸಾಧಿಕ್, ರೆಹಮತ್ ಉಲ್ಲಾ, ಜೆ.ರೆಹಮಾನ್, ಅಜೀಜ್ಸಾಬ್, ಆದಿಲ್ಪಾಷ, ಕದಿರಿ ಯೂಸುಫ್, ಸೈಯ್ಯದ್ ಮತ್ತಿತರರು ಹಾಜರಿದ್ದರು.
- Advertisement -
- Advertisement -
- Advertisement -
- Advertisement -