‘ಕೊಡಮೆಯಲ್ಲಿ ಬಿದ್ದ ಮೀನು ಬಲು ರುಚಿ’ ಎಂಬ ಮಾತು ಗ್ರಾಮೀಣರಲ್ಲಿ ಜನಜನಿತ. ಈ ಮಾತಿಗೆ ನಿದರ್ಶನದಂತೆ ಈಚೆಗೆ ಬಿದ್ದ ಮಳೆಗೆ ತಾಲ್ಲೂಕಿನ ಅಪ್ಪೇಗೌಡನಹಳ್ಳಿ ಗ್ರಾಮದಲ್ಲಿನ ಕುಂಟೆಯ ಬಳಿ ಗ್ರಾಮದ ಯುವಜನರು ನೆರೆದಿದ್ದರು. ಕುಂಟೆಗೆ ಹರಿದು ಬರುವ ಸಿಹಿನೀರಿನ ಕಾಲುವೆಗೆ ಅಡ್ಡಲಾಗಿ ಕೊಡಮೆ ಹಾಕಿ ಮೀನುಗಳನ್ನು ಹಿಡಿದಿಡಿದು ತುಂಬಿಕೊಳ್ಳುತ್ತಿದ್ದರು.
ಕೊಡಮೆಗಳನ್ನು ಮೀನು ಹಿಡಿಯುವ ಕಾಯಷುದಾರರು ತಮ್ಮ ಬಿಡುವಿನ ವೇಳೆಯಲ್ಲಿ ಬಿದುರು ಮತ್ತು ಮೇಣ ಮೆತ್ತಿದ ಚಕ್ಕೆದಾರ ಬಳಸಿ ಕೊಡಮೆಗಳನ್ನು ತಯಾರಿಸಿಕೊಳ್ಳುತ್ತಾರೆ.
ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಯಲ್ಲಿ ಮೀನು ಹಿಡಿಯುವುದು ಪ್ರಾರಂಭವಾಗುವುದು ಚೆನ್ನಾಗಿ ಮುಂಗಾರು ಮಳೆಯಾಗಿ ಕೆರೆಗಳಿಗೆ ನೀರು ಹರಿದು ಬರುವಾಗ, ಇಲ್ಲವೇ ಬೇಸಿಗೆಯಲ್ಲಿ ಕೆರೆಯ ನೀರು ಕಡಿಮೆಯಾಗಿ ಟಾಕುಗಳಲ್ಲಿ (ಚೌಕಾಕಾರದ ಮಡಿ) ತಪ್ಪಿಸಿಕೊಂಡ ಮೀನುಗಳನ್ನು ಹಿಡಿಯಲೂ ಕೊಡಮೆ ಬಳಸುತ್ತಾರೆ. ಈ ಕ್ರಿಯೆಯನ್ನು ಕೊಡಮೆ ಹಾಕುವುದು, ಕೊಡಮೆ ಇಕ್ಕುವುದು ಎನ್ನುತ್ತಾರೆ. ಕೊಡಮೆ ಕಟ್ಟುವುದು ಒಂದು ಕುಶಲತೆಯಿಂದ ಕೂಡಿದ ಕೆಲಸ. ಬಹುಶಃ ಇದು ಮೀನು ಹಿಡಿಯುವ ಸಾಧನಗಳಲ್ಲಿಯೇ ಅತ್ಯಂತ ಸುಂದರವಾದುದು.
ಕೊಡಮೆಯಲ್ಲಿ ಇಂದಿನ ಕ್ಯಾಟ್ಲಾಕ್ ನಂತಹ ಮೀನನ್ನು ಹಿಡಿಯಲಾಗುವುದಿಲ್ಲ. ಅತ್ಯಂತ ರುಚಿಕರವಾದ ಪಕ್ಕೆಗಳು, ಗಿರ್ಲು, ಕೊರದನ, ಉಣಿಸೆ ಮುಂತಾದ ಸ್ಥಳೀಯ ಮೀನಿನ ಪ್ರಬೇಧಗಳನ್ನಷ್ಟೆ ಬೇಟೆಯಾಡಬಹುದು. ಹೀಗೆ ಕೊಡಮೆಯಲ್ಲಿ ಹಿಡಿದ ಗಿರ್ಲು, ಕೊರದನ, ಉಣಿಸೆ ಮೀನುಗಳಿಗೆ ಹೆಚ್ಚು ಬೇಡಿಕೆಯೂ ಇದೆ. ಅದರಲ್ಲೂ ಉಣಿಸೆ ಮೀನುಗಳೆಂದರೆ ಸಸ್ಯಾಹಾರಿಗಳಿಗೆ ಹುರುಳಿ ಎಷ್ಟು ಪ್ರಿಯವೋ ಬಯಲು ಸೀಮೆಯ ಮೀನು ಪ್ರಿಯರಿಗೆ ಉಣಿಸೆ ಮೀನುಗಳು ಅಷ್ಟೊಂದು ಪ್ರಿಯ. ಆದರೆ ಕೆರೆ ಹೂಳೆತ್ತುವ ಯೋಜನೆಯಲ್ಲಿ ಮತ್ತು ಅನಾವೃಷ್ಠಿಯ ಕಾರಣದಿಂದ ಕೆರೆಗಳಿಗೆ ನೀರಿಲ್ಲದೆ ಈ ಸಾಂಪ್ರದಾಯಿಕ ಜಾನಪದ ರುಚಿಯುಳ್ಳ ಮೀನುಗಳನ್ನು ಅವುಗಳ ವಂಶವನ್ನು ಕಳೆದುಕೊಳ್ಳುತ್ತಿದ್ದೇವೆ. ಇವುಗಳನ್ನು ಮೀನುಗಾರಿಕೆ ಇಲಾಖೆ ಪ್ರತ್ಯೇಕ ಸಾಕಣೆ ಪದ್ಧತಿಯ ಮೂಲಕ ಉಳಿಸಿಕೊಳ್ಳಬೇಕಿದೆ’ ಎನ್ನುತ್ತಾರೆ ಅಪ್ಪೇಗೌಡನಹಳ್ಳಿಯ ಎ.ಎಂ.ತ್ಯಾಗರಾಜ್.
–ಡಿ.ಜಿ.ಮಲ್ಲಿಕಾರ್ಜುನ