ತಾಲ್ಲೂಕಿನ ತಾತಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ಎಂ.ದೇವರಾಜ್ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಕಳೆದ 25 ವರ್ಷಗಳಿಂದ ಹೊಸ ಬಗೆಯ ಶಿಕ್ಷಣದ ಕೈಂಕರ್ಯವನ್ನು ತಮ್ಮ ಹೆಗಲ ಮೇಲೆ ಹೊತ್ತುಕೊಂಡಿರುವ ಇವರು ಸ್ವಗ್ರಾಮ ಕಾಚಹಳ್ಳಿಯಾದರೂ ತಾಲ್ಲೂಕಿನಾದ್ಯಂತ ಕನ್ನಮಂಗಲ ದೇವರಾಜ್ ಎಂದೇ ಹೆಸರಾಗಿದ್ದಾರೆ. ಸುಮಾರು 20 ವರ್ಷಗಳ ಕಾಲ ತಮ್ಮ ಕರ್ಮಭೂಮಿಯಂತೆ ತಾಲ್ಲೂಕಿನ ಕನ್ನಮಂಗಲ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಅಚ್ಚುಮೆಚ್ಚಿನ ಶಿಕ್ಷಕರಾಗಿದ್ದರು.
ಶಾಲೆಯಲ್ಲಿ ಗಮನವಿಟ್ಟು ಕಲಿಯದ, ಹೋಮ್ ವರ್ಕ್ ಮಾಡಿಕೊಂಡು ಬರದ, ಪರೀಕ್ಷೆಯಲ್ಲಿ ಸಾಕಷ್ಟು ಅಂಕ ಗಳಿಸದ ವಿದ್ಯಾರ್ಥಿಗೂ ಕ್ರಿಯಾಶೀಲತೆಯಿಂದ ಅವರಿಂದಲೂ ಸಂವೇದನಾಶೀಲ ಆಪ್ತ ಬರಹಗಳನ್ನು ಬರೆಸಿದರು. ತಮ್ಮ ಪರಿಸರದಲ್ಲಿ ಕಂಡುದರ ಬಗ್ಗೆ ಮಕ್ಕಳು ಬರೆಯತೊಡಗಿದರು. ಈಗಲೂ ಬರೆಯುತ್ತಲೇ ಇದ್ದಾರೆ.
ಮಕ್ಕಳಿಗೆ ಸ್ವರಚಿತ ನಾಟಕಗಳನ್ನು ಕಲಿಸಿ, ಪ್ರದರ್ಶನಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ. ಕಲಿಕೆಗೆ ಪೂರಕವಾದ ಹಲವಾರು ಕಲಿಕೋಪಕರಣಗಳನ್ನು ತಯಾರಿಸಿದ್ದಾರೆ. ಶಾಲೆ ಮತ್ತು ಇಲಾಖೆಯ ವತಿಯಿಂದ ವಿವಿಧ ಸಭೆ-ಸಮಾರಂಭಗಳಿಗೆ ವಿಶೇಷ ರೀತಿಯಲ್ಲಿ ವೇದಿಕೆ ಹಾಗೂ ಉದ್ಘಾಟನಾ ಜ್ಯೋತಿಯನ್ನು ಸಿದ್ಧಗೊಳಿಸುವರು.
ಇವರಿಗೆ ೨೦೦೧–-೦೨ ನೇ ಸಾಲಿನಲ್ಲಿ ಜನಮೆಚ್ಚಿದ ಶಿಕ್ಷಕ ಪ್ರಶಸ್ತಿಯನ್ನು ಶಿಕ್ಷಣ ಇಲಾಖೆ ನೀಡಿ ಗೌರವಿಸಿದೆ. ೨೦೦೩–-೨೦೦೪ ರಲ್ಲಿ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಕೊಡಲಾಗಿದೆ.
‘ನನ್ನ ಅದೃಷ್ಟ ಎಂದರೆ ನನ್ನೊಂದಿಗೆ ಕೆಲಸ ಮಾಡಿದ ಮತ್ತು ಮಾಡುವ ಶಾಲೆಯ ಎಲ್ಲ ಶಿಕ್ಷಕರು, ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು ಬೆನ್ನು ತಟ್ಟಿ ಪ್ರೋತ್ಸಾಹಿಸಿದ್ದಾರೆ. ಕನ್ನಮಂಗಲ ಊರಿನ ಜನ ನಮ್ಮ ಬೆನ್ನಿಗೆ ನಿಂತರು. ಊರಿನ ಯುವಕರೆಲ್ಲ ಸೇರಿಕೊಂಡು ಕಟ್ಟಿರುವ ಸ್ನೇಹ ಯುವಕರ ಸಂಘ ಸಹಾಯ ಮಾಡಿತು. ಹೀಗಾಗಿ ಮಕ್ಕಳಿಗಾಗಿ ನಾನೊಂದಿಷ್ಟು ಕೆಲಸ ಮಾಡಲು ಸಾಧ್ಯವಾಯಿತು’ ಎನ್ನುತ್ತಾರೆ ಶಿಕ್ಷಕ ಎಂ.ದೇವರಾಜ್.
- Advertisement -
- Advertisement -
- Advertisement -
- Advertisement -