ಪಕ್ಷಾತೀತವಾದ, ಜಾತ್ಯಾತೀತವಾದ ಜನರಿಗಾಗಿ ನಡೆಸುತ್ತಿರುವ ಕಾಲ್ನಡಿಗೆ ಜಾಥಾ ಹಮ್ಮಿಕೊಂಡಿದ್ದೇವೆ. ಇಲ್ಲಿನ ಜನರ ಬದುಕು ಉಳಿಯಲು ಎಲ್ಲಾ ವರ್ಗದ ಜನರು ಬೆಂಬಲಿಸಬೇಕು ಎಂದು ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಎಂ.ಪಿ.ಮುನಿವೆಂಕಟಪ್ಪ ತಿಳಿಸಿದರು.
ಸಿಪಿಎಂ ಪಕ್ಷ ಜಿಲ್ಲಾಧ್ಯಂತ ಕಾಲ್ನಡಿಗೆ ಜಾಥಾ ನಡೆಸುತ್ತಿದ್ದು, ಚಿಂತಾಮಣಿ ತಾಲ್ಲೂಕನ್ನು ಮುಗಿಸಿಕೊಂಡು ತಾಲ್ಲೂಕಿನ ಗಂಜಿಗುಂಟೆ ಹೋಬಳಿಯಿಂದ ಶನಿವಾರ ಮಧ್ಯಾಹ್ನ ನಗರವನ್ನು ಪ್ರವೇಶಿಸಿ ಅವರು ಮಾತನಾಡಿದರು.
ಕಳೆದ ಆರು ವರ್ಷಗಳಿಂದ ನಮ್ಮ ಜಿಲ್ಲೆ ಸತತವಾಗಿ ಬರಗಾಲಕ್ಕೆ ತುತ್ತಾಗಿದೆ. ಕುಡಿಯುವ ನೀರಿಗೂ ಸಹ ಕಷ್ಟವಾಗಿದೆ. ಜಾನುವಾರುಗಳ ಮೇವಿಗೂ ದುಸ್ತರವಾಗಿದೆ. ರೈತರು ಸಂಪೂರ್ಣವಾಗಿ ಸಾಲದ ಕೂಪದಲ್ಲಿ ಮುಳುಗಿದ್ದಾರೆ. ಕೃಷಿ ಕಾರ್ಮಿಕರಿಗೆ ಕೆಲಸವಿಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಜಿಲ್ಲೆಯ ಜ್ವಲಂತ ಸಮಸ್ಯೆಯ ಬಗ್ಗೆ ಇದುವರೆಗೂ ಜಿಲ್ಲಾಡಳಿತವಾಗಲಿ, ಸರ್ಕಾರವಾಗಲಿ ಮಾತನಾಡದಿರುವುದು ದೊಡ್ಡ ದುರಂತ.
ಕಾಲ್ನಡಿಗೆಯ ಮೂಲಕ ಜನರನ್ನು ಮುಟ್ಟಬೇಕು. ಅವರ ಸಮಸ್ಯೆಗಳು ಆಳುವ ಸರ್ಕಾರಕ್ಕೆ ಮುಟ್ಟಿಸಬೇಕು ಎಂಬುದು ನಮ್ಮ ಉದ್ದೇಶವಾಗಿದೆ.
ರೈತರ ಸಾಲ ಮನ್ನಾ ಮಾಡಬೇಕು. ಬೆಳೆ ನಷ್ಟ ಹೊಂದಿದವರಿಗೆ ಎಕರೆಗೆ 25 ಸಾವಿರ ರೂಗಳು ಪರಿಹಾರವಾಗಿ ನೀಡಬೇಕು. ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ನು ಸಮರ್ಪಕವಾಗಿ ಜಾರಿ ಮಾಡಬೇಕು. 200 ದಿನಗಳ ಕೆಲಸವನ್ನು ನೀಡಬೇಕು. ಜಾನುವಾರುಗಳಿಗೆ ಮೇವು ಮತ್ತು ಕುಡಿಯುವ ನೀರನ್ನು ಸಮರ್ಪಕವಾಗಿ ವಿತರಿಸಬೇಕು. ಬಡವರಿಗೆ ನಿವೇಶನ ಮತ್ತು ಮನೆ ನೀಡಬೇಕು. ಹಲವೆಡೆ ಶೌಚಾಲಯ ನಿರ್ಮಿಸಿಕೊಂಡವರಿಗೆ ಸರ್ಕಾರದಿಂದ ಬರಬೇಕಾದ ಹಣ ಬಿಡುಗಡೆಯಾಗಿಲ್ಲ ಮುಂತಾದ ಜನರ ಸಮಸ್ಯೆಗಳನ್ನು ಬೇಡಿಕೆಗಳನ್ನು ಈಡೇಸಿಬೇಕೆಂದು ಸರ್ಕಾರಕ್ಕೆ ಒತ್ತಾಯಿಸುತ್ತಿದ್ದೇವೆ.
ನಾವು ಹೋದೆಡೆಯಲ್ಲೆಲ್ಲಾ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿದೆ. ಜನರು ತಮ್ಮ ಸಮಸ್ಯೆಗಳನ್ನು ವಿವರಿಸುತ್ತಾ ಆಗಿರುವ ಅನ್ಯಾಯವನ್ನು ಹೇಳುತ್ತಿದ್ದಾರೆ. ಜೂನ್ 3ನೇ ತಾರೀಖು ಚಿಕ್ಕಬಳ್ಳಾಪುರದ ಜಿಲ್ಲಾಡಳಿತ ಕಚೇರಿಗೆ ಸುಮಾರು 15 ಸಾವಿರ ಜನ ರೈತ ಮುತ್ತಿಗೆ ಕಾರ್ಯಕ್ರಮವಿದೆ. ಈ ನಿಟ್ಟಿನಲ್ಲಿ ಜಿಲ್ಲೆಯಾದ್ಯಂತ ಒಟ್ಟು 564 ಕಿ.ಮೀ ಕಾಲ್ನಡಿಗೆ ಜಾಥಾ ನಡೆಸಲಿದ್ದೇವೆ. 448 ಹಳ್ಳಿಗಳನ್ನು ನಾವು ಭೇಟಿ ಮಾಡುತ್ತಿದ್ದೇವೆ ಎಂದು ವಿವರಿಸಿದರು.
ಸಿಪಿಎಂ ಮುಖಂಡರಾದ ಸಾವಿತ್ರಮ್ಮ, ಶ್ರೀನಿವಾಸ್, ಮುನಿಕೃಷ್ಣಪ್ಪ, ಶಿವಣ್ಣ, ಜೆ.ಶ್ರೀನಿವಾಸ್, ವಿಶ್ವನಾಥರೆಡ್ಡಿ, ರಾಮಲಿಂಗಪ್ಪ ಹಾಜರಿದ್ದರು.
- Advertisement -
- Advertisement -
- Advertisement -
- Advertisement -