ಜಿಲ್ಲಾ ಕೇಂದ್ರ ಚಿಕ್ಕಬಳ್ಳಾಪುರದ ಚದಲಪುರದ ಬಳಿಯಲ್ಲಿ ನಡೆಯುತ್ತಿರುವ ಶಾಶ್ವತ ನೀರಾವರಿ ಹೋರಾಟದ ಸ್ಥಳಕ್ಕೆ ಇದುವರೆಗೂ ಜಿಲ್ಲಾ ಉಸ್ತುವಾರಿ ಸಚಿವ ರೋಷನ್ಬೇಗ್ ಅವರು ಬೇಟಿ ನೀಡದೆ ಈ ಭಾಗದ ಜನತೆಯನ್ನು ಕಡೆಗಣಿಸಿದ್ದಾರೆ. ಅವರು ಭಾಗವಹಿಸುವ ಸಭೆ ಸಮಾರಂಭಗಳಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಲಾಗುತ್ತದೆ ಎಂದು ರೈತ ಸಂಘದ ಮುಖಂಡರು ಎಚ್ಚರಿಕೆ ನೀಡಿದರು.
ನಗರದ ತಾಲ್ಲೂಕು ಕಚೇರಿಯ ಬಳಿ ಮಂಗಳವಾರ ತಹಶೀಲ್ದಾರ್ ಮುಖಾಂತರ ಸರ್ಕಾರಕ್ಕೆ ಮನವಿ ಸಲ್ಲಿಸಿದ ವರದನಾಯಕನಹಳ್ಳಿ ಹಾಗೂ ಚೀಮನಹಳ್ಳಿ ಗ್ರಾಮಸ್ಥರು ಮಾತನಾಡಿದರು.
ಅವಿಭಜಿತ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ನೀರಾವರಿ ತಜ್ಞ ಪರಮಶಿವಯ್ಯನವರ ವರದಿಯಂತೆ ನೀರಾವರಿ ಯೋಜನೆಯನ್ನು ಕಲ್ಪಿಸಿಕೊಡುವಂತೆ ಕಳೆದ ಹಲವು ವರ್ಷಗಳಿಂದ ನಿರಂತರವಾಗಿ ಹೋರಾಟಗಳನ್ನು ಮಾಡುತ್ತಿದ್ದರೂ ಈ ಭಾಗದ ರೈತಾಪಿ ವರ್ಗದ ಸಹನೆಯನ್ನು ಪರೀಕ್ಷಿಸುವಂತೆ ಸರ್ಕಾರಗಳು ಜಾಣಕುರುಡು ಪ್ರದರ್ಶನ ಮಾಡುತ್ತಿವೆ. ಇಡೀ ದೇಶಕ್ಕೆ ಚಿನ್ನ, ರೇಷ್ಮೆ, ಹಾಲು, ಹೂವು, ತರಕಾರಿಗಳನ್ನು ಪೂರೈಸಿದ ಜನರಿಗೆ ಕುಡಿಯುವ ನೀರು ಕೊಟ್ಟು ಉಳಿಸಬೇಕೆಂಬ ಕನಿಷ್ಟ ಸೌಜನ್ಯವೂ ಇಲ್ಲದೆ, ಸರ್ಕಾರಗಳು ನಿರ್ಲಕ್ಷ್ಯ ವಹಿಸುತ್ತಿವೆ.
ಬಯಲು ಸೀಮೆ ಭಾಗದಲ್ಲಿನ ಜನತೆಯ ಜೀವನಕ್ಕೆ ಯಾವುದೇ ನದಿನಾಲೆಗಳ ಆಸರೆಯಿಲ್ಲ. ಸುಮಾರು ೧೫೦೦ ಅಡಿಗಳು ಕೊರೆದರೂ ಒಂದಿಂಚು ನೀರು ಸಿಗುತ್ತಿಲ್ಲ. ನಾವು ಕುಡಿಯುತ್ತಿರುವ ನೀರು ಪ್ಲೋರೈಡ್ ಮಿಶ್ರಿತವಾಗಿದ್ದು, ಖಾಯಿಲೆಗಳಿಗೆ ತುತ್ತಾಗುತ್ತಿದ್ದೇವೆ. ನಾವು ತಿನ್ನುತ್ತಿರುವ ಆಹಾರವೂ ಕೂಡಾ ವಿಷವಾಗಿದೆ. ಇಂತಹ ಸಂದರ್ಭದಲ್ಲಿಯೂ ರಾಜಕೀಯ ಪ್ರತಿಷ್ಠೆಗಳಿಂದ ಜನಪ್ರತಿನಿಧಿಗಳು, ಇನ್ನೂ ವಿಳಂಬ ಮಾಡುವುದು ತರವಲ್ಲ. ಒಂದು ಕೊಳವೆಬಾವಿಯನ್ನು ಕೊರೆಸಲು ೫ ರಿಂದ ೬ ಲಕ್ಷ ರೂಪಾಯಿಗಳು ಖರ್ಚಾಗುತ್ತಿದ್ದು, ಸಾಲಗಳನ್ನು ಮಾಡಿರುವ ರೈತರು ಆತ್ಮಹತ್ಯೆಗಳಿಗೆ ಒಳಗಾಗುತ್ತಿದ್ದಾರೆ. ನೀರು ಕೇಳುವುದು ಸಂವಿಧಾನ ಬದ್ದವಾಗಿ ನಮ್ಮ ಹಕ್ಕು.
ಸರ್ಕಾರ ಇದೇ ರೀತಿಯಾಗಿ ಅಸಡ್ಡೆ ಮಾಡಿದರೆ, ಮುಂದೆ ಆಗುವಂತಹ ಅನಾಹುತಗಳಿಗೆ ಸರ್ಕಾರವೇ ನೇರ ಹೊಣೆಯಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ನಗರದ ಪ್ರಮುಖ ಬೀದಗಳಲ್ಲಿ ಬೈಕ್ರ್ಯಾಲಿಯನ್ನು ನಡೆಸುವ ಮೂಲಕ ನೀರಾವರಿ ಹೋರಾಟದ ಸ್ಥಳಕ್ಕೆ ತೆರಳಿದರು.
ತಾಲ್ಲೂಕು ರೈತ ಸಂಘ, ಹಸಿರು ಸೇನೆ ತಾಲ್ಲೂಕು ಅಧ್ಯಕ್ಷ ತಾದೂರು ಮಂಜುನಾಥ್, ವಿ.ಎನ್.ಗಜೇಂದ್ರ, ವೇಣು, ವಿಶ್ವನಾಥ, ದ್ಯಾವಪ್ಪ, ಆಂಜಿನಮ್ಮ, ಅಮರನಾಥ, ನಾಗರಾಜ, ವಿ.ಆರ್.ಶ್ರೀನಿವಾಸ್ ಮತ್ತಿತರರು ಹಾಜರಿದ್ದರು.
- Advertisement -
- Advertisement -
- Advertisement -
- Advertisement -