ತಾಲ್ಲೂಕಿನ ಮೇಲೂರು ಗ್ರಾಮದಲ್ಲಿ ಶ್ರೀ ಧರ್ಮರಾಯಸ್ವಾಮಿ ದ್ರೌಪತಮ್ಮನವರ 30ನೇ ವರ್ಷದ ಹೂವಿನ ಕರಗ ಸೋಮವಾರ ರಾತ್ರಿ ನಡೆಯಿತು. ಮೇಲೂರು ಹಾಗೂ ಸುತ್ತಮುತ್ತಲ ಗ್ರಾಮಗಳಿಂದ ಆಗಮಿಸಿದ್ದ ಭಕ್ತರು ಕರಗ ಮಹೋತ್ಸವವನ್ನು ಕಣ್ತುಂಬಿಕೊಂಡರು.
ಗ್ರಾಮದಲ್ಲಿ ಶ್ರೀ ಧರ್ಮರಾಯಸ್ವಾಮಿ ದ್ರೌಪತಮ್ಮ ದೇವಿಯ ಕರಗ ಮಹೋತ್ಸವದ ಅಂಗವಾಗಿ ದೇವಾಲಯವನ್ನು ಸುಣ್ಣ ಬಣ್ಣ, ಹೂವುಗಳಿಂದ ಅಲಂಕರಿಸಲಾಗಿತ್ತು. ವಿಶೇಷ ಪೂಜೆ ನೆರವೇರಿಸಲಾಯಿತು. ವಿವಿಧ ಹೂಗಳಿಂದ ದೇವರ ಮೂರ್ತಿಗಳನ್ನು ಸಿಂಗರಿಸಲಾಗಿತ್ತು. ಝಗಮಗಿಸುತ್ತಿದ್ದ ವಿದ್ಯುತ್ ದೀಪಗಳು ಬೆಳದಿಂಗಳ ವಾತಾವರಣವನ್ನು ಸೃಷ್ಟಿಸಿದ್ದವು.
ಕರಗದ ಅಂಗವಾಗಿ ಗ್ರಾಮದಲ್ಲಿ ರಸಸಂಜೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ವಾಲಗ, ತಮಟೆ ಮತ್ತು ವಾದ್ಯವೃಂದದ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿತ್ತು.
ನಾನಾ ಪೂಜೆ ಪುನಸ್ಕಾರಗಳನ್ನು ನಡೆಸಿ ಮಲ್ಲಿಗೆ ಹೂವುಗಳಿಂದ ಅಲಂಕರಿಸಿದ ಕರಗವನ್ನು ತಲೆ ಮೇಲೆ ಹೊತ್ತ ಲಕ್ಕೂರು ಉಮೇಶ್ ಊರ ಪ್ರಮುಖ ಬೀದಿಗಳಲ್ಲಿ ನಡೆದರು. ತಮಟೆಯ ತಂಡ, ಕೈಯ್ಯಲ್ಲಿ ಕತ್ತಿ ಹಿಡಿದು ಝಳಪಿಸುತ್ತಿದ್ದ ವೀರಕುಮಾರರ ತಂಡವೂ ಅವರನ್ನು ಹಿಂಬಾಲಿಸಿತ್ತು.
ತಮಟೆಯ ಏಟಿಗೆ ತಕ್ಕಂತೆ ಕರಗ ಹೊತ್ತ ಲಕ್ಕೂರು ಉಮೇಶ್ ಹೆಜ್ಜೆ ಹಾಕಿದ್ದೇ ಅಲ್ಲದೆ ನೆಲದವರೆಗೂ ಬಾಗಿ ಎದ್ದು ನೋಡುಗರನ್ನು ಉಸಿರು ಬಿಗಿ ಹಿಡಿದು ನಿಲ್ಲುವಂತೆ ಮಾಡಿದರು. ಊರಿನ ಜನ ತಮ್ಮ ಮನೆ ಮುಂದೆ ಸಾರಿಸಿ, ಸಿಂಗರಿಸಿ ರಂಗೋಲೆ ಹಾಕಿ ಕರಗವನ್ನು ಸ್ವಾಗತಿಸಿ ಪೂಜಿಸಿದರು.
- Advertisement -
- Advertisement -
For Daily Updates
WhatsApp 'HI' to 7406303366
- Advertisement -
- Advertisement -