ನಗರದ ಸ್ವಚ್ಚತೆ ಬಗ್ಗೆ ಅಧಿಕಾರಿಗಳು ಹೆಚ್ಚಿನ ಕಾಳಜಿ ವಹಿಸಬೇಕು. ನಗರ ಸ್ವಚ್ಛವಿದ್ದರೆ ಮಾತ್ರ ನಗರಸಭೆ ಹಾಗು ನಗರಸಭೆ ಸದಸ್ಯರ ಗೌರವ ಉಳಿಯುತ್ತದೆ ಎಂದು ನಗರಸಭೆ ಅಧ್ಯಕ್ಷ ಅಫ್ಸರ್ಪಾಷ ತಿಳಿಸಿದರು.
ನಗರದ ಮುಖ್ಯರಸ್ತೆಗಳು ಸೇರಿದಂತೆ ಬಹುತೇಕ ವಾರ್ಡುಗಳಲ್ಲಿ ತುಂಬಿ ತುಳುಕುತ್ತಿರುವ ಕಸದ ರಾಶಿಗಳ ಬಗ್ಗೆ ಪ್ರತಿನಿತ್ಯ ದಿನಪತ್ರಿಕೆಗಳಲ್ಲಿ ಸುದ್ದಿ ಪ್ರಕಟವಾಗುತ್ತಿರುವ ಹಿನ್ನಲೆಯಲ್ಲಿ ಶನಿವಾರ ಅಧಿಕಾರಿಗಳ ತುರ್ತು ಸಭೆ ನಡೆಸಿ ಅವರು ಮಾತನಾಡಿದರು.
ನಗರಸಭೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ನಗರಸಭೆಯ ಸದಸ್ಯರು ತಲೆ ತಗ್ಗಿಸುವ ವಾತಾವರಣ ನಿರ್ಮಾಣವಾಗಿದೆ. ಇದು ಹೀಗೆ ಮುಂದುವರೆದರೇ ನಗರಕ್ಕೂ ಹಾಗು ನಗರಸಭೆಗೆ ಕೆಟ್ಟ ಹೆಸರು ಬರುತ್ತದೆ. ನಗರಸಭೆಯಲ್ಲಿ ಹಾಲಿ ಇರುವ ೩೨ ಮಂದಿ ಖಾಯಂ ಪೌರ ಕಾರ್ಮಿಕರಿಂದ ನಗರಸಭೆ ಸ್ವಚ್ಚತೆಗೆ ಹೆಚ್ಚಿನ ಆಧ್ಯತೆ ನೀಡಬೇಕು. ಬೆಳಗ್ಗೆ ಬಂದು ೧೦ ಗಂಟೆಗೆ ಹೊರಟು ಹೋಗುವ ಪೌರ ಕಾರ್ಮಿಕರಿಂದ ಮದ್ಯಾಹ್ನ ೨ ರಿಂದ ಸಂಜೆ ೫ ಗಂಟೆಯವರೆಗೂ ಕೆಲಸ ತೆಗೆದುಕೊಳ್ಳಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳು ಮತ್ತಷ್ಟು ಕಾಳಜಿ ವಹಿಸಬೇಕು ಎಂದರು.
ಇನ್ನು ನಗರಸಭೆಯ ಆದಾಯ ಹೆಚ್ಚಿಸಲು ನಗರದ ೫ ಕಿ.ಮೀ ವ್ಯಾಪ್ತಿಯಲ್ಲಿರುವ ಎಲ್ಲಾ ಖಾಸಗಿ ಶಾಲೆಗಳಿಗೂ ನೊಟೀಸ್ ಜಾರಿ ಮಾಡಿ ಅವರಿಂದ ಕಂದಾಯ ವಸೂಲು ಮಾಡುವಂತೆ ಸೂಚಿಸಿದರು. ನಗರಸಭೆಯಿಂದ ಯಾವುದೇ ಅನುಮತಿ ಪಡೆಯದೇ ಕಟ್ಟಡ ನಿರ್ಮಿಸಿಕೊಂಡು ಕೆಲವರು ಖಾಸಗಿ ಶಾಲೆಗಳನ್ನು ನಡೆಸುತ್ತಿದ್ದಾರೆ. ಏನಾದರೂ ಅವಘಡ ಸಂಭವಿಸಿದರೆ ಜವಾಬ್ದಾರಿ ಯಾರು ಎಂದ ಅವರು ಕೂಡಲೇ ಎಲ್ಲಾ ಖಾಸಗಿ ಶಾಲೆಗಳು ಸೇರಿದಂತೆ ಕಲ್ಯಾಣ ಮಂಟಪಗಳಿಗೆ ನೊಟೀಸ್ ಜಾರಿಗೊಳಿಸಿ ಎಂದರು.
ಇನ್ನು ನಗರಸಭೆಗೆ ಸೇರಿದ ಅಂಗಡಿ ಮಳಿಗೆಗಳ ಬಾಡಿಗೆಯನ್ನು ಸಕಾಲದಲ್ಲಿ ವಸೂಲಿ ಮಾಡುವಂತೆ ಸೂಚಿಸಿದರು.
ಸ್ವಚ್ಚ ಭಾರತ್, ಎಸ್ಎಫ್ಸಿ ಅನುದಾನ, ನಗರೋತ್ಥಾನ ಯೋಜನೆ ೨ನೇ ಹಂತ, ಸೇರಿದಂತೆ ವಿವಿಧ ಯೋಜನೆಗಳ ಪ್ರಗತಿಯ ವರದಿಯನ್ನು ಕೂಡಲೇ ಸಲ್ಲಿಸುವಂತೆ ಸಭೆಯಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರಸಭೆ ಉಪಾಧ್ಯಕ್ಷೆ ಪ್ರಭಾವತಿ ಸುರೇಶ್, ಆಯುಕ್ತ ಹರೀಶ್, ವ್ಯವಸ್ಥಾಪಕ ಮಂಜುನಾಥ್ ಸೇರಿದಂತೆ ನಗರಸಭೆಯ ಎಲ್ಲ ಅಧಿಕಾರಿ, ಸಿಬ್ಬಂದಿ ಹಾಜರಿದ್ದರು.