Home News ಗುರುಮಠಗಳು ರಾಜಕೀಯವನ್ನು ನಿಯಂತ್ರಿಸುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕು

ಗುರುಮಠಗಳು ರಾಜಕೀಯವನ್ನು ನಿಯಂತ್ರಿಸುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕು

0

ಆಧುನಿಕ ವಿಕಾರಗಳ ದಿನಗಳಲ್ಲಿ ಕ್ರಿಯಾಶೀಲ ಶಿಕ್ಷಕ ವಿದ್ಯಾರ್ಥಿಗಳ ಮನಸ್ಸಿನಲ್ಲಿ ಮಹಾನುಭಾವನಾಗುತ್ತಾನೆ. ಈ ಅವಕಾಶ ಶಿಕ್ಷಕನಿಗೆ ಮಾತ್ರ ಇದೆ ಎಂದು ಸಾಹಿತಿ ಸ.ರಘುನಾಥ ಅಭಿಪ್ರಾಯಪಟ್ಟರು.
ನಗರದ ಹೊರವಲಯದ ಹನುಮಂತಪುರ ಗೇಟ್ ಬಳಿಯ ಬಿ.ಜಿ.ಎಸ್ ಶಿಕ್ಷಣ ಸಂಸ್ಥೆಯಲ್ಲಿ ಸೋಮವಾರ ನಡೆದ 70ನೇ ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ನೂತನ ಕ್ರೀಡಾಂಗಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳಿಗೆ ಹಿಂಸೆ ಅನ್ನಿಸದ ರೀತಿಯಲ್ಲಿ ಅತ್ಯಲ್ಪ ಪ್ರಮಾಣದ ದಂಡನೆ ಇರಬೇಕು. ಅದು ಶಿಸ್ತಿಗೆ ಪೂರಕವಾಗಿರಬೇಕು. ಅನೇಕ ಪೋಷಕರು ಮಕ್ಕಳ ಬೇಡಿಕೆಗಳನ್ನು ಪೂರೈಸುವುದಕ್ಕಷ್ಟೆ ಸೀಮಿತರಾಗಿದ್ದಾರೆ. ಹಾಗಾಗಿ ಶಿಕ್ಷಕರು ಅಂತಹ ಪೋಷಕರ ಮಕ್ಕಳ ತಂದೆತಾಯಿ ಪಾತ್ರವನ್ನು ವಹಿಸಬೇಕಾಗಿದೆ.
ನಮಗೆ ಇರುವ ರಾಜಕೀಯ ಸ್ವಾತಂತ್ರ್ಯ ಕಳೆದುಕೊಳ್ಳುತ್ತಿರುವ ಆರ್ಥಿಕ ಸ್ವಾತಂತ್ರ್ಯದಲ್ಲಿ ಕರಗಿಹೋಗುತ್ತಿದೆ. ಈ ಎರಡೂ ಉಳಿಯಬೇಕಾದರೆ ಸ್ವದೇಶಿ ಬಂಡವಾಳ ಅಭಿವೃದ್ಧಿಗೊಳ್ಳಬೇಕು. ಇಲ್ಲವಾದಲ್ಲಿ ದೇಶ ಮತ್ತು ದೇಶಪ್ರಜೆ ನಾಶವಾಗುತ್ತಾರೆ. ಇಂದಿನ ಒಳ್ಳೆಯ ಓದುಗ ನಾಳೆಯ ಒಳ್ಳೆಯ ನಾಯಕನಾಗುತ್ತಾನೆ. ಈ ಕೊರತೆಯನ್ನು ವಿದ್ಯಾರ್ಥಿಗಳು ನೀಗಬೇಕಿದೆ. ಗುರುಮಠಗಳು ರಾಜಕೀಯವನ್ನು ನಿಯಂತ್ರಿಸುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಆದಿಚುಂಚನಗಿರಿ ಚಿಕ್ಕಬಳ್ಳಾಪುರ ಶಾಖಾ ಮಠದ ಮಂಗಳನಾಥಸ್ವಾಮೀಜಿ ಆಶೀರ್ವಚನ ನೀಡಿ ಮಾತನಾಡಿ, ಒಂದು ದಿನದ ಘೋಷಣೆ ಮತ್ತು ಬಾವುಟ ಹಾರಿಸುವುದರಿಂದ ದೇಶ ಸುಭದ್ರಗೊಳ್ಳುವುದಿಲ್ಲ. ಈ ಕ್ರಿಯೆಯು ಆತ್ಮಾವಲೋಕನಕ್ಕೆ ಕಾರಣವಾಗಬೇಕು. ಪ್ರತಿಯೊಬ್ಬ ವಿದ್ಯಾರ್ಥಿಯೂ ಸಾಧನೆಯ ಹಾದಿಯತ್ತ ಸಾಗಿದಾಗ ಮಾತ್ರ ಈ ದಿನದ ಕಾರ್ಯಕ್ರಮ ಅರ್ಥಪೂರ್ಣವಾಗುತ್ತದೆ. ತಮ್ಮ ನೆಚ್ಚಿನ ರಂಗಗಳಲ್ಲಿ ವಿದ್ಯಾರ್ಥಿಗಳು ಕೃಷಿ ಮಾಡುವ ಮೂಲಕ ಶಾಲೆಗೆ ಕೀರ್ತಿತರಬೇಕೆಂದು ಹೇಳಿದರು.
ಶಾಲೆಯ ವಿದ್ಯಾರ್ಥಿಗಳು ರಚಿಸಿದ್ದ ದೇಶ ಭಕ್ತಿಯನ್ನು ಬಿಂಬಿಸುವ ಚಿತ್ರಗಳನ್ನು ಪ್ರದರ್ಶಿಸಲಾಗಿತ್ತು. ದೇಶಭಕ್ತಿ ಗೀತೆಗಳಿಗೆ ನೃತ್ಯವನ್ನು ಮಾಡಿ ವಿದ್ಯಾರ್ಥಿಗಳು ಮೆಚ್ಚುಗೆಗೆ ಪಾತ್ರರಾದರು.
ಬಿ.ಜಿ.ಎಸ್ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲ ಮಹದೇವಯ್ಯ, ಮುಖಂಡರಾದ ಕೆಂಪರೆಡ್ಡಿ, ಮುರಳಿ ಮತ್ತಿತರರು ಹಾಜರಿದ್ದರು.