Home News ಕೋಟೆ ಶ್ರೀರಾಮ ದೇವಾಲಯದಲ್ಲಿ ಸುಗಮ ಸಂಗೀತ ಕಾರ್ಯಕ್ರಮ

ಕೋಟೆ ಶ್ರೀರಾಮ ದೇವಾಲಯದಲ್ಲಿ ಸುಗಮ ಸಂಗೀತ ಕಾರ್ಯಕ್ರಮ

0

ಸಂಗೀತವು ಮನಸ್ಸನ್ನು ಸುಸಂಸ್ಕೃತಗೊಳಿಸುವ ಗುಣವುಳ್ಳದ್ದು. ಮನಸ್ಸನ್ನು ಹಿಡಿದಿಡುವ ಹಾಗೂ ಏಕಾಗ್ರತೆಯಡೆಗೆ ಸಾಗಿಸುವ ಸಾಧನವಾಗಿದೆ ಸಂಗೀತ ಎಂದು ಡಾ.ಡಿ.ಟಿ.ಸತ್ಯನಾರಾಯಣರಾವ್ ತಿಳಿಸಿದರು.
ನಗರದ ಕೋಟೆ ಶ್ರೀರಾಮ ದೇವಾಲಯದಲ್ಲಿ ಸೋಮವಾರ ಸಂಜೆ ರೂರಲ್ ಯೂತ್ ಡೆಸ್ಟಿಟ್ಯೂಟ್ ಡೆವಲಪ್ಮೆಂಟ್ ಸೊಸೈಟಿ, ಉನ್ನತಿ ಮಾನವ ಹಕ್ಕುಗಳ ರಕ್ಷಣಾ ಸಂಘ ಮತ್ತು ಕನ್ನಡ ಸಂಸ್ಕೃತಿ ಇಲಾಖೆ ಸಂಯುಕ್ತಾಶ್ರಯದಲ್ಲಿ ನಡೆದ ಸುಗಮ ಸಂಗೀತ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಂಗೀತವು ಎಲ್ಲರ ಮನಸ್ಸನ್ನು ಅರಳಿಸುವ ಮಾದ್ಯಮ. ಹಾಗಾಗಿ ಸಂಗೀತಗಾರರು, ಕಲಾಕಾರರಿಗೆ ಪ್ರೇಕ್ಷಕನ ಆಶೀರ್ವಾದವೇ ಆಸ್ತಿ. ಕಲಾವಿದರನ್ನು ಚಪ್ಪಾಳೆ ತಟ್ಟಿ ಹುರಿದುಂಬಿಸುವ ಕಾರ್ಯವನ್ನು ಮಾಡುವ ಮೂಲಕ ಕಲಾಪೋಷಣೆ ಮಾಡಬೇಕು. ಅದರ ಮೂಲಕ ಸಾಂಸ್ಕೃತಿಕ ಪರಿಸರವನ್ನು ವಿಸ್ತರಿಸಬೇಕು ಎಂದು ಹೇಳಿದರು.
ಚಿಕ್ಕಬಳ್ಳಾಪುರ ಸುಗಮ ಸಂಗೀತ ಕಲಾವಿದ ಜ್ಞಾನಕುಮಾರ್ ಮತ್ತು ತಂಡ, ಗುಡಿಬಂಡೆ ಅಮರನಾರಾಯಣ ಅವರ ತಂಡ, ನ್ಯಾಮಗೊಂಡ್ಲು ಲಕ್ಷ್ಮಯ್ಯ ವೆಂಕಟೇಶಮೂರ್ತಿ ಸುಗಮ ಸಂಗೀತ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ಈ ಸಂದರ್ಭದಲ್ಲಿ ಅಂಧ ಕಲಾವಿದ ಸಂಗೀತ ಸ್ನಾತಕೋತ್ತರ ಪದವೀಧರರಾದ ಗುಡಿಬಂಡೆ ಅಮರನಾರಾಯಣ ಅವರನ್ನು ಸನ್ಮಾನಿಸಲಾಯಿತು.
ಶಾರದಾ ವಿದ್ಯಾಸಂಸ್ಥೆಯ ಅಧ್ಯಕ್ಷ ಎ.ಆರ್.ಮುನಿರತ್ನಂ, ಪತಂಜಲಿ ಯೋಗ ಕೇಂದ್ರದ ಕಾರ್ಯದರ್ಶಿ ಶ್ರೀಕಾಂತ್, ಪುರಸಭಾ ಸದಸ್ಯ ಪಿ.ಕೆ.ಕಿಶನ್, ರೂರಲ್ ಯೂತ್ ಡೆಸ್ಟಿಟ್ಯೂಟ್ ಡೆವಲಪ್ಮೆಂಟ್ ಸೊಸೈಟಿ ಅಧ್ಯಕ್ಷ ಬಿ.ಎಸ್.ರಘು, ವಕೀಲ ಜಿ.ವಿ.ವಿಶ್ವನಾಥ್, ಚನ್ನಕೃಷ್ಣಪ್ಪ, ವೆಂಕಟೇಶ್ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.