Home News ಕೆಟ್ಟ ನಡತೆಯಿರುವ ವಾಟರ್‌ಮನ್‌ ಬದಲಿಸಲು ಒತ್ತಾಯ

ಕೆಟ್ಟ ನಡತೆಯಿರುವ ವಾಟರ್‌ಮನ್‌ ಬದಲಿಸಲು ಒತ್ತಾಯ

0

ಗ್ರಾಮದ ಮಹಿಳೆಯರನ್ನು ಅವಾಚ್ಯವಾಗಿ ಮಾತನಾಡುವ ಕೆಟ್ಟ ನಡತೆಯಿರುವ ವಾಟರ್‌ಮನ್‌ ನನ್ನು ಕೆಲಸದಿಂದ ತೆಗೆದು ಬೇರೆಯವರನ್ನು ನಿಯುಕ್ತಿಗೊಳಿಸುವಂತೆ ತಾಲ್ಲೂಕಿನ ಮುತ್ತೂರು ಗ್ರಾಮದಲ್ಲಿ ಗ್ರಾಮಸ್ಥರು ಒತ್ತಾಯಿಸಿದರು.
ಮುತ್ತೂರು ಗ್ರಾಮದಲ್ಲಿ ಗುರುವಾರ ಗ್ರಾಮಸ್ಥರು ಸಭೆ ಸೇರಿ ವಾಟರ್‌ಮನ್‌ ನಿಂದಾಗುತ್ತಿರುವ ತೊಂದರೆಗಳ ಬಗ್ಗೆ ಚರ್ಚಿಸಿದರು. ವಾಟರ್‌ಮನ್‌ ಸಂತೋಷ್‌ ಬದಲಿಗೆ ಆತನ ತಂದೆ ಕುಪ್ಪಪ್ಪ ಸುಮಾರು ಐದು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದು, ಸುಮಾರು ಒಂದೂವರೆ ವರ್ಷಗಳಿಂದ ಕುಡಿತದ ಚಟಕ್ಕೆ ಬಲಿಯಾಗಿ ಮಹಿಳೆಯರನ್ನು ಲೈಂಗಿಕ ಆಸಕ್ತಿಯಿಂದ ಮಾತನಾಡಿಸುವುದು, ಹಿರಿಯರನ್ನು ಅವಾಚ್ಯ ಶಬ್ದಗಳನ್ನು ಬಳಸಿ ಮಾತನಾಡುವುದೂ ರೂಢಿಸಿಕೊಂಡಿದ್ದಾನೆ. ಹಲವಾರು ಬಾರಿ ಎಚ್ಚರಿಸಿದ್ದರೂ ತನ್ನ ದುರಭ್ಯಾಸವನ್ನು ಆತ ಬಿಡದ ಕಾರಣ ಆತನನ್ನು ಆ ಕೆಲಸದಿಂದ ತೆಗೆಯಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಹಾಜರಿದ್ದ ಗ್ರಾಮದ ಗ್ರಾಮ ಪಂಚಾಯತಿ ಸದಸ್ಯರಾದ ವೆಂಕಟರಾಜೇಗೌಡ ಮತ್ತು ವೇಣುಗೋಪಾಲ್‌ ಈ ಬಗ್ಗೆ ಪಂಚಾಯತಿಯಲ್ಲಿ ತುರ್ತು ಸಭೆ ಸೇರಿ ಕ್ರಮ ಕೈಗೊಳ್ಳುವುದಾಗಿ ಹೇಳಿದರು.
‘ಅತ್ಯಂತ ಸುಸಂಸ್ಕೃತ ಜನರಿರುವ ನಮ್ಮ ಗ್ರಾಮ ಸಾಮರಸ್ಯಕ್ಕೆ ಹೆಸರಾದುದು. ಚುನಾವಣೆ ಬಿಟ್ಟರೆ ಮಿಕ್ಕೆಲ್ಲಾ ಸಮಯದಲ್ಲೂ ಒಗ್ಗಟ್ಟಿನಿಂದಿರುವ ನಮ್ಮ ಗ್ರಾಮದಲ್ಲಿ ಎಲ್ಲಾ ಜನಾಂಗದವರೂ ಅಣ್ಣತಮ್ಮಂದಿರಂತೆ ವಾಸಿಸುತ್ತಿದ್ದೇವೆ. ನೀರಿನ ಹಂಚಿಕೆಯಲ್ಲೂ ಯಾರಿಗೂ ಸಮಸ್ಯೆಯಾಗದಂತೆ ಸಮನಾಗಿ ಹಂಚಿಕೆ ಮಾಡುತ್ತಾ ಬಂದಿದ್ದೇವೆ. ಆದರೆ ಕುಡಿತಕ್ಕೆ ದಾಸನಾಗಿರುವ ವಾಟರ್‌ಮನ್‌ ಗ್ರಾಮದ ಮಹಿಳೆಯರು ಹಾಗೂ ಹಿರಿಯರೊಂದಿಗೆ ಕೆಟ್ಟದಾಗಿ ನಡೆದುಕೊಳ್ಳುತ್ತಿರುವುದರಿಂದ ನಾವೆಲ್ಲಾ ಒಗ್ಗಟ್ಟಿನಿಂದ ಆತನನ್ನು ಬದಲಿಸಲು ತೀರ್ಮಾನಿಸಿದ್ದೇವೆ. ಈ ಬಗ್ಗೆ ಗ್ರಾಮ ಪಂಚಾಯತಿ ಕಾರ್ಯದರ್ಶಿ, ತಾಲ್ಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ ಹಾಗೂ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅವರಿಗೂ ದೂರು ನೀಡುತ್ತೇವೆ’ ಎಂದು ಗ್ರಾಮದ ಮುಖಂಡ ಎ.ಎಸ್‌.ಚಂದ್ರೇಗೌಡ ತಿಳಿಸಿದರು.
ಗ್ರಾಮದ ಗೋಪಾಲಪ್ಪ, ಮುರಳಿ, ಸೂರ್ಯನಾರಾಯಣಪ್ಪ, ರಾಮರೆಡ್ಡಿ, ಬೈರೇಗೌಡ, ನಾರಾಯಣಸ್ವಾಮಿ, ಶ್ರೀನಿವಾಸ್‌, ವೀರೇಗೌಡ, ಮುನಿನಾರಾಯಣ, ಗಜೇಂದ್ರ, ಬೈರಾರೆಡ್ಡಿ, ರವಿ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.