ಒಂದು ಸಣ್ಣ ತಲೆನೋವು ಅಥವಾ ಜ್ವರ ಬಂದ ತಕ್ಷಣ ನಾವೆಲ್ಲಾ ವೈದ್ಯರಲ್ಲಿಗೆ ದೌಡಾಯಿಸುತ್ತೇವೆ. ಆದರೆ ನಿಭಾಯಿಸಲಾರದ ಒತ್ತಡಗಳು, ಖಿನ್ನತೆ, ಆತ್ಮಹತ್ಯೆಯ ಪ್ರಯತ್ನದಂತಹ ತೀವ್ರವಾದ ಮಾನಸಿಕ ತೊಂದರೆಗಳಿದ್ದಾಗಲೂ ಸೂಕ್ತವಾದ ಮನೋಚಿಕಿತ್ಸೆಗಳನ್ನು ಪಡೆಯಲು ಹಿಂಜರಿಯುತ್ತೇವೆ. ಇದೇಕೆ ಹೀಗೆ?
ಮೊದಲನೆಯದಾಗಿ ದೈಹಿಕ ಖಾಯಿಲೆಗಳೆಂದರೆ ಮನುಷ್ಯ ಸಹಜ, ಹಾಗಾಗಿ ಅದರ ಬಗೆಗೆ ಎಲ್ಲರೆದುರು ಹೇಳಿಕೊಳ್ಳುವುದರಲ್ಲಿ ಅಪಮಾನವೇನೂ ಇಲ್ಲ ಎಂದುಕೊಳ್ಳುತ್ತೇವೆ. ಆದರೆ ಮಾನಸಿಕ ಖಾಯಿಲೆಯೆಂದರೆ ಒಂದು ರೀತಿಯ “ಹುಚ್ಚು”, ಆದ್ದರಿಂದ ಅಂತವರೆಲ್ಲಾ ಸಮಾಜದಲ್ಲಿ ಎಲ್ಲರ ಜೊತೆ ಬಾಳಲು ಯೋಗ್ಯರಲ್ಲದವರು ಎನ್ನುವುದು ಸಾಮಾನ್ಯ ನಂಬಿಕೆ. ವಿಪರ್ಯಾಸವೆಂದರೆ ಮಾನಸಿಕ ರೋಗಿಗಳಿಗಿಂತ ತಮ್ಮ ಕೆಟ್ಟ ಅಥವಾ ಅನೈತಿಕ ಜೀವನ ಶೈಲಿಯಿಂದ ಕ್ಯಾನ್ಸರ್ ಅಥವಾ ಲೈಂಗಿಕ ರೋಗಗಳನ್ನು ಅಂಟಿಸಿಕೊಂಡವರೂ ಕೂಡ ಸಾಮಾಜಿಕವಾಗಿ ಹೆಚ್ಚಿನ ಸ್ಥರದಲ್ಲಿರುತ್ತಾರೆ.
ಮೂರನೆಯದಾಗಿ “ಮನೋರೋಗಕ್ಕೆ ಮದ್ದಿಲ್ಲ” ಎನ್ನುವ ಗಾದೆ ಮಾತನ್ನು ನಾವು ಈಗಲೂ ನಂಬುತ್ತೇವೆ. ತೀವ್ರತರವಾದ ಮಾನಸಿಕ ರೋಗಿಗಳನ್ನು (ಹೆಚ್ಚಿನ ಸಂದರ್ಭಗಳಲ್ಲಿ ಸುತ್ತಲಿನ ಪರಿಸರದ ಅರಿವೇ ಇಲ್ಲದವರಿಗೆ ಮತ್ತು ದೈಹಿಕ ಹಿಂಸೆಯಂತಹ ಘಾತುಕ ಕೃತ್ಯಗಳಲ್ಲಿ ತೊಡಗಿರುವವರಿಗೆ) ಔಷಧಗಳ ಮೂಲಕ ಹಿಡಿತದಲ್ಲಿಡಲು ಮನೋವೈದ್ಯರು ಸಹಾಯ ಮಾಡುತ್ತಾರೆ. ಇಂತಹವರಿಗೆ ಒಮ್ಮೆ ಸುತ್ತಲಿನ ಪ್ರಪಂಚದ ಅರಿವು ಬರತೊಡಗಿದೊಡನೆ ಸೂಕ್ತ ಆಪ್ತಸಲಹೆ ಮತ್ತು ಮನೋಚಿಕಿತ್ಸೆಯ ಮೂಲಕ ಎಲ್ಲರಂತೆ ಸಮಾಜದಲ್ಲಿ ಬದುಕಲು ಕಲಿಸಬಹುದು. ಇನ್ನು ಸುತ್ತಲಿನ ಪ್ರಪಂಚದ ಅರಿವನ್ನು ಕಳೆದುಕೊಳ್ಳದಿದ್ದರೂ ನಿತ್ಯ ಜೀವನಕ್ಕೆ ತೊಂದರೆಯಾಗುವಂತಹ ಮಾನಸಿಕ ಕಿರಿಕಿರಿಗಳನ್ನು ಅನುಭವಿಸುವವರು ತಜ್ಞರಿಂದ ಮನೋಚಿಕಿತ್ಸೆ ಪಡೆದಲ್ಲಿ ಔಷಧಿಗಳಿಲ್ಲದೆ ತಮ್ಮ ಬದುಕನ್ನು ಸುಖಮಯವಾಗಿಸಿಕೊಳ್ಳಬಹುದು.
ಇವತ್ತು ಎಲ್ಲಾ ವಿಜ್ಞಾನದ ಶಾಖೆಗಳಂತೆ ಮನೋವಿಜ್ಞಾನ ಕೂಡ ಹೊಸಹೊಸ ಒಳನೋಟಗಳನ್ನು ಪಡೆದುಕೊಳ್ಳುತ್ತಿದೆ. ಔಷಧಗಳಿಲ್ಲದೆ ಮಾನಸಿಕ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳುವ ಹೊಸ ಮನೋಚಿಕಿತ್ಸಾ ವಿಧಾನಗಳು ರೂಪಗೊಂಡಿವೆ. ಆಪ್ತಸಲಹೆ ಮತ್ತು ಮನೋಚಿಕಿತ್ಸೆ (Counseling & Psychotherapy) ಹೆಚ್ಚು ಪ್ರಚಲಿತವಾಗುತ್ತಿವೆ.
ಸಮಸ್ಯೆಗಳನ್ನು ಹೇಳಿಕೊಳ್ಳದವರೆಲ್ಲಾ ಸಮಸ್ಯೆಯಿಂದ ಮುಕ್ತರು ಎಂದೆನೂ ತಿಳಿಯಬೇಕಿಲ್ಲ. ಹೆಚ್ಚಿನ ಜನ ಸಾಮಾಜಿಕ ಕಳಂಕದ ದೃಷ್ಟಿಯಿಂದ ಸಮಸ್ಯೆಗಳನ್ನು ಮುಚ್ಚಿಟ್ಟಿರುತ್ತಾರೆ. ಸಮಸ್ಯೆಗಳ ಪರಿಹಾರದ ಮೊದಲ ಹಂತ ಸಮಸ್ಯೆ ಇರುವುದನ್ನು ಒಪ್ಪಿಕೊಳ್ಳುವುದು ಎನ್ನವುದನ್ನು ನಾವೆಲ್ಲಾ ಮರೆಯಬಾರದು.
ಮನಸ್ಸು ತೀವ್ರವಾಗಿ ಗೊಂದಲದಲ್ಲಿದ್ದಾಗ ಕುಟುಂಬ ವೈದ್ಯರಲ್ಲಿ ಸಲಹೆಪಡೆದು ತಜ್ಞರನ್ನು ಸಪರ್ಕಿಸಿದರೆ ಪರಿಹಾರಗಳು ಸುಲುಭವಾಗಿ ಸಾಧ್ಯವಾಗುತ್ತವೆ.
ವಸಂತ್ ನಡಹಳ್ಳಿ