ಒಂದು ಟನ್ ತೂಕದ ಈ ಸಂಚಾರಿ ಹಿಂದಿನ ರೋವರುಗಳಿಗಿಂತ ಗಾತ್ರದಲ್ಲಿ ಐದು ಪಟ್ಟು ದೊಡ್ಡದು, ಹಾಗಾಗಿ ಕಡಿಮೆ ಗುರುತ್ವದ ಕುಜನೆಲದಲ್ಲಿ ಅದನ್ನು ಸರಾಗವಾಗಿ ಇಳಿಸಿದ್ದು ಬಲು ದೊಡ್ಡ ಸಾಹಸವೇ. ಅದಕ್ಕಾಗಿ ಬಳಸಿದ ಬಾನ ಕ್ರೇನ್ ವ್ಯವಸ್ಥೆಯನ್ನು ಇದೇ ಮೊದಲ ಬಾರಿ ಅನ್ಯಗ್ರಹದಲ್ಲಿ ಅಳವಡಿಸಲಾಗಿದೆ. ಹಿಂದೆ ರೋವರುಗಳನ್ನು ಕೆಳಕ್ಕಿಳಿಸುವಾಗ 70-100 ಕಿಮೀ ವಿಸ್ತಾರವನ್ನು ಗುರಿಯಾಗಿ ಪರಿಗಣಿಸಿದ್ದರೆ ಈ ಸಲ ಬರೀ 10 ಕಿಮೀ ವಿಸ್ತಾರದೊಳಗೆ ಇಳಿಸಲು ಸಾಧ್ಯವಾಗಿದ್ದೂ ಒಂದು ಸಾಧನೆಯೇ.
ಇನ್ನೂ ಒಂದು ವಿಶೇಷತೆಯೆಂದರೆ, ಕಂಪ್ಯೂಟರ್ ವ್ಯವಸ್ಥೆಯಲ್ಲಿ ಒಂದೇನಾದರೂ ವಿಫಲಗೊಂಡರೆ ಇನ್ನೊಂದು ಕಾರ್ಯನಿರ್ವಹಿಸಲು ಸದಾಸಿದ್ಧವಾಗಿದೆ. ಸೌರವಿದ್ಯುತ್ ಬದಲಾಗಿ ಪ್ಲುಟೋನಿಯಂ-238ನ ಅಣುಕ್ಷಯದಿಂದ ತಯಾರಾಗುವ ವಿದ್ಯುತ್ತನ್ನು ಕ್ಯೂರಿಯಾಸಿಟಿಯಲ್ಲಿ ಬಳಸಲಾಗುತ್ತಿದೆ. ಮಂಗಳನಲ್ಲಿ ಆಗೀಗ ಬೀಸುವ ಬಿರುಗಾಳಿಯಿಂದಾಗಿ ಸೌರಫಲಕಗಳು ದೂಳು ಮುಚ್ಚಿ ಮಸುಕಾಗಿ ಅವುಗಳ ಕಾರ್ಯಕ್ಷಮತೆ ತಗ್ಗುವದರಿಂದ ಈ ತಂತ್ರ. 687 ಭೂದಿನಗಳು ಅಥವಾ ಮಂಗಳ ಗ್ರಹದಲ್ಲಿ ಒಂದು ವರ್ಷ ಕಾಲ ಈ ಸಂಚಾರಿ ವಾಹನ ಓಡಾಡುವುದಕ್ಕೆ ಹಾಗೂ ಕ್ಯಾಮೆರಾ, ರೊಬಾಟ್ ಕೈ ಮತ್ತಿತರ ಉಪಕರಣಗಳ ಚಲನೆಗೆ ಅವಶ್ಯವಿರುವಷ್ಟು 110 ವ್ಯಾಟ್ ವಿದ್ಯುತ್ತನ್ನು ಇದು ಸದಾಕಾಲ ಒದಗಿಸುತ್ತದೆ. ಅಣುಜನರೇಟರಿನಿಂದ ಹದವಾಗಿ ಬಿಸಿಗೊಂಡ ದ್ರವವೊಂದು ಉಪಕರಣಗಳನ್ನು ಬೆಚ್ಚಗಿಡುವುದಕ್ಕೆ ಸಹಾಯ ಮಾಡುತ್ತದೆ. ಅಲ್ಪ ಸೌರವಿದ್ಯುತ್ತನ್ನು ಒದಗಿಸುವ ಲಿಥಿಯಂ ಬ್ಯಾಟರಿಗಳೂ ಅಲ್ಲಿವೆ. ತುರ್ತು ಪರಿಸ್ಥಿತಿ ಎದುರಾಗಿ ಹೆಚ್ಚುವರಿ ವಿದ್ಯುತ್ತೇನಾದರೂ ಅಗತ್ಯ ಬಿದ್ದಲ್ಲಿ ಈ ಬ್ಯಾಟರಿಗಳು ಪೂರೈಸುತ್ತವೆ.
ಮಂಗಳಪಯಣಕ್ಕೆ ಭರದಿಂದ ಸಿದ್ಧತೆ
ಭೂಮಿಯ ಆಚೆಯೂ ಜೀವಿಗಳಿರಬಹುದೇ, ಅನ್ಯಗ್ರಹಗಳಲ್ಲಿ ವಾಸಯೋಗ್ಯ ವಾತಾವರಣದ ಸಾಧ್ಯತೆಗಳೆಷ್ಟು ಎಂಬುದರ ಬಗ್ಗೆ ಮಾನವನ ಅನ್ವೇಷಣಾ ಬುದ್ಧಿ ಮುಂಚಿನಿಂದಲೂ ಸಂಶೋಧನೆ ನಡೆಸಿದೆ.
ಬಾಹ್ಯಾಕಾಶ ಹಾಗೂ ಅದಕ್ಕೆ ಸಂಬಂಧಿತ ಗಣಿತ, ಭೌತ, ರಸಾಯನ, ಜೀವ ಇತ್ಯಾದಿ ವಿಜ್ಞಾನ ಕ್ಷೇತ್ರಗಳಲ್ಲಿ ತಂತ್ರಜ್ಞಾನ ಹೆಚ್ಚು ಸುಧಾರಣೆಗೊಂಡಂತೆ ಕೆಲವು ವರ್ಷಗಳಿಂದ ನಮ್ಮ ಸಮೀಪದಲ್ಲಿರುವ ಮಂಗಳಗ್ರಹ ಅಧ್ಯಯನಕ್ಕೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಮಂಗಳ ಗ್ರಹಕ್ಕೆ ಪ್ರವಾಸ ನಡೆಸುವ, ಮುಂದೆ ಅಲ್ಲಿಯೇ ಮಾನವರಿಗೆ ವಸತಿ ಕಲ್ಪಿಸುವ ಹಾಗೂ ಆ ಇಡೀ ಗ್ರಹವನ್ನೇ ಮಾನವನ ವಸಾಹತು ಮಾಡುವ ದಿನಗಳು ದೂರವಿಲ್ಲ ಎಂಬೆಲ್ಲ ಮಾತುಗಳು ಕೇಳಿಬರುತ್ತಿವೆ.
2001 ರಲ್ಲಿ ಐರೋಪ್ಯ ಬಾಹ್ಯಾಕಾಶ ಸಂಸ್ಥೆ 2030ರಲ್ಲಿ ಕೆಂಪು ಗ್ರಹಕ್ಕೆ ಮಾನವನ್ನು ಕಳಿಸುತ್ತೇವೆ ಎಂಬ ವಿಶ್ವಾಸದೊಂದಿಗೆ ಅರೋರಾ ಎಂಬ ಯೋಜನೆಯನ್ನು ಹುಟ್ಟು ಹಾಕಿತು. ಅಮೆರಿಕದ ಮಾಜಿ ಅಧ್ಯಕ್ಷ ಬುಶ್ 2020 ಕ್ಕೆ ಚಂದ್ರನಲ್ಲಿಗೆ, ಆನಂತರ ಮಂಗಳ ಗ್ರಹಕ್ಕೆ ಮಾನವನ ಉಡ್ಡಯನ ಎಂದು 2004 ರಲ್ಲಿ ಘೋಷಿಸಿದರು.
ಆದರೂ ಮಾನವನ ಸಾಹಸ ಪೃವೃತ್ತಿ ಚಂದ್ರ, ಮಂಗಳರನ್ನು ಕೈವಶ ಮಾಡಿಕೊಳ್ಳಲು ಪ್ರಯತ್ನಿಸುತ್ತಲೇ ಇದೆ. ಮೊದಲು ಉಪಗ್ರಹ, ದೂರದರ್ಶಕಗಳ ಮೂಲಕ ದೂರದಿಂದಲೇ ಆ ಕಾಯಗಳ ಬಗ್ಗೆ ಶೋಧ ನಡೆಸಿ, ಆನಂತರ ಯಂತ್ರೋಪಕರಣಗಳನ್ನು ಅಲ್ಲಿಗೇ ಕಳುಹಿಸಿ ಮತ್ತಿಷ್ಟು ಮಾಹಿತಿ ಪಡೆಯಲಾಗುತ್ತಿದೆ. ಮಂಗಳಯಾನಕ್ಕೆ ಮುಂದಾದ ಅಮೆರಿಕ, ರಷ್ಯಾ, ಐರೋಪ್ಯ ಒಕ್ಕೂಟ, ಜಪಾನ್ ಮತ್ತು ಚೀನಾ ದೇಶಗಳ ಪಟ್ಟಿಗೆ ಭಾರತವೂ ಸೇರಲಿದೆ. ನಮ್ಮ ಇಸ್ರೋ ಸಂಸ್ಥೆ 2013ರಲ್ಲಿ ಮಂಗಳನ ಅಧಯಯನಕ್ಕೆಂದು ಮಾನವರಹಿತ ಉಪಗ್ರಹ ನೌಕೆಯನ್ನು ಹಾರಿಬಿಡಲಿದೆ.
ಇತ್ತ ಭೂಮಿಯ ಮೇಲೂ ಮಂಗಳಕ್ಕೆ ಹಾರಿ ಹೋಗಲು ಉತ್ಸಾಹ ಭರದಿಂದ ಸಿದ್ಧತೆಗಳು ನಡೆಯುತ್ತಿವೆ. ‘ಮಾರ್ಸ್ 500’ ಆ ನಿಟ್ಟಿನಲ್ಲಿ ರಷ್ಯಾ ಮತ್ತು ಐರೋಪ್ಯ ದೇಶಗಳು ನಡೆಸಿದ ಒಂದು ಪ್ರಯೋಗ. ಮಾಸ್ಕೋದ ‘ರಷ್ಯನ್ ಜೀವವೈದ್ಯಕೀಯ ಸಂಸ್ಥೆ’ ಯ ಆವರಣದಲ್ಲಿ ನಿರ್ಮಿಸಲಾದ ವಿಶೇಷ ಗೂಡೊಂದರಲ್ಲಿ ಆರು ತಂತ್ರಜ್ಞರು ಬಾನಪ್ರವಾಸದ ಅಣಕು ಕಾರ್ಯಾಚರಣೆಯಲ್ಲಿ ಪಾಲ್ಗೊಂಡರು. ಮೊದಲೊಮ್ಮೆ 105 ದಿನಗಳು ಮಗದೊಮ್ಮೆ 520 ದಿನಗಳ ಕಾಲ ಏಕಾಂತವಾಸದಲ್ಲಿ ಕಳೆದರು.
ಎರಡನೆಯ 520 ದಿನಗಳ ಪ್ರಯೋಗದಲ್ಲಿ, 250 ದಿನಗಳ ‘ಮಂಗಳ ಗ್ರಹಕ್ಕೆ ಪಯಣ’, ಮುಂದೆ ಒಂದು ತಿಂಗಳು ‘ಮಂಗಳನ ನೆಲದಲ್ಲಿ ಇಳಿಯುವುದು ಹಾಗೂ ಅಲ್ಲಿ ಅನ್ವೇಷಣೆ ನಡೆಸುವುದು’ ಹಾಗೂ ಮುಂದಿನ 230 ದಿನಗಳು ‘ಮರಳಿ ಭೂಮಿಗೆ’ ಇವುಗಳ ಅಣಕುಕಾರ್ಯ ನಡೆಯಿತು.
ತಂತ್ರಜ್ಞಾನ, ವೈದ್ಯಕೀಯ, ಜೀವಶಾಸ್ತ್ರ ಮತ್ತು ಬಾಹ್ಯ ಆಕಾಶ ಕುರಿತಾದ ತಜ್ಞರಾದ ಆ ಮಾರ್ಸೊನಾಟ್ಗಳು (ಅವರಲ್ಲಿ ಮೂವರು ರಷ್ಯನ್ನರು, ಇಬ್ಬರು ಯುರೋಪಿನವರು ಹಾಗೂ ಒಬ್ಬ ಚೀನಾದ ತಂತ್ರಜ್ಞ) ಕಳೆದ ನವೆಂಬರ್ 18ರಂದು 17 ತಿಂಗಳ ಏಕಾಂತ ವಾಸದ ನಂತರ ಹೊರಬಂದರು. ಮತ್ತೂ ಒಂದು ತಿಂಗಳು ಅವರನ್ನು ಜೀವವೈದ್ಯಕೀಯ ಪರೀಕ್ಷೆಗೊಳಪಡಿಸಲಾಯಿತು. ಸಂಘಜೀವಿ ಮಾನವ ದೀರ್ಘಕಾಲ ಏಕಾಂತವಾಸದಲ್ಲಿದ್ದಾಗ ಆತನ ದೇಹ ಮತ್ತು ಮನಸ್ಸುಗಳ ಅವಸ್ಥೆ, ಮಾನಸಿಕ ಒತ್ತಡದಲ್ಲಿದ್ದಾಗ ದೇಹದ ಹಾರ್ಮೋನುಗಳು, ರೋಗನಿರೋಧಕ ಶಕ್ತಿ ಇತ್ಯಾದಿಗಳಲ್ಲಾಗುವ ಬದಲಾವಣೆಗಳು ಒಟ್ಟಾರೆ ತಂತ್ರಜ್ಞರ ಮಾತು, ಊಟ, ಆಟ, ಕೆಲಸ, ವ್ಯಾಯಾಮ, ನಿದ್ದೆ ಪ್ರತಿಯೊಂದೂ ಚಟುವಟಿಕೆಯ ಅಧ್ಯಯನಕ್ಕೆಂದು ಮಾರ್ಸ್500 ಅಣಕು ನೌಕೆಯಲ್ಲಿ ಸುಮಾರು ನೂರು ಪ್ರಯೋಗಗಳು ನಡೆದಿವೆ. ಇಂದು ಅವರ ಅನುಭವ ದಾಖಲೆಗಳಿಗೆ ಜಗತ್ತಿನ ಮೂಲೆಮೂಲೆಗಳ ವಿಜ್ಞಾನಿಗಳಿಂದ ಎಲ್ಲಿಲ್ಲದ ಬೇಡಿಕೆಯಿದೆ.
ಆದರೆ ಅಲ್ಲಿ ಬಾಹ್ಯ ಆಕಾಶದ ವಿಕಿರಣಗಳ ಪ್ರಭಾವದ ಅಧ್ಯಯನ ಇರಲಿಲ್ಲ. ಇದುವರೆಗಿನ ಸಂಶೋಧನೆ ಮತ್ತು ಅನುಭವಗಳ ಪ್ರಕಾರ ವಿಕಿರಣ ಸೇವನೆ ಮಾನವ ದೇಹಕ್ಕೆ ಬಹಳಷ್ಟು ಹಾನಿಯುಂಟುಮಾಡುತ್ತದೆ. ಶೂನ್ಯ ಗುರುತ್ವದ ಅನುಭವವೂ ಅಲ್ಲಿರಲಿಲ್ಲ. ದೇಹವನ್ನು ಕೆಳಕ್ಕೆ ಜಗ್ಗುವ ಗುರುತ್ವದ ಬಲ ಇರದಿದ್ದಾಗ ಮಾಂಸಖಂಡಗಳು ಬಲಹೀನವಾಗುತ್ತವೆ, ಅದರಲ್ಲೂ ದೇಹಭಾರವನ್ನು ಹೊರುವ ಸೊಂಟ, ಮೊಣಕಾಲು ಮತ್ತು ಹಿಮ್ಮಡಿಗಳು ಹೆಚ್ಚು ಹಾನಿಗೊಳಗಾಗುತ್ತವೆ. ದೇಹದ ಅನೈಚ್ಛಿಕ ಪ್ರತಿಕ್ರಿಯೆಗಳು (ಉದಾ: ಬೆಂಕಿ ತಾಗಿದಾಗ ಕೈ ಹಿಂದಕ್ಕೆಳೆದುಕೊಳ್ಳುವುದು). ಮಂಗಳನಲ್ಲಿ ಗುರುತ್ವ ಇಲ್ಲಿಗಿಂತ ಮೂರು ಪಟ್ಟು ಕಡಿಮೆ ಇದೆ. ವಿರಳ ವಾತಾವರಣವಿದೆ.
ನೈಸರ್ಗಿಕ ಆಮ್ಲಜನಕ ಅಲ್ಲಿಲ್ಲ, ವಾತಾವರಣದಲ್ಲಿ ಮಾನವ ದೇಹಕ್ಕೆ ಒಗ್ಗದ ಇಂಗಾಲದ ಡೈಆಕ್ಸೈಡ್ ಅಧಿಕವಾಗಿದೆ. ಕೃತಕವಾಗಿ ವಾಯುಪೂರೈಕೆ ಆಗಬೇಕು, ಆ ವ್ಯವಸ್ಥೆಯೂ ಅಲ್ಲಿರಲಿಲ್ಲ. ಆದರೂ ಕೂಡ ಮಾರ್ಸ್500 ಪ್ರಯೋಗ ಮಂಗಳಪಯಣದ ಅಧ್ಯಯನಕ್ಕೆ ಸಾಕಷ್ಟು ಸಾಮಗ್ರಿ ಒದಗಿಸಿದೆ.
ಮಂಗಳ ಗ್ರಹದಲ್ಲಿ ಇಳಿಯುವುದೆಲ್ಲಿ?
ಈ ಹೊಂಡಗಳಲ್ಲಿ ಹಿಂದೆಂದಾದರೂ ಸೂಕ್ಷ್ಮಜೀವಿಗಳು ವಾಸವಾಗಿದ್ದ ಲಕ್ಷಣಗಳೇನಾದರೂ ಈಗ ದೊರೆತಾವೇ? ಮುಂದೆ ಮಾನವ ವಸತಿಗೆ ಅನುಕೂಲವಾಗಬಹುದಾದ ಅಂಶಗಳೇನಾದರೂ ಕಂಡುಬಂದಾವೇ? ಯಶಸ್ವೀ ಅಧ್ಯಯನಕ್ಕೆಂದು ಪ್ರಯೋಗಾಲಯವನ್ನು ಇಂಥದ್ದೊಂದು ಕುಳಿಯಲ್ಲಿಯೇ ಇಳಿಸಬೇಕು ಎಂಬುದು ಎಲ್ಲರ ಒಮ್ಮತದ ಅಭಿಪ್ರಾಯವಾಯಿತು. ಆದರೆ ಮಂಗಳನಲ್ಲಿರುವ ನೂರಾರು ಕುಳಿಗಳಲ್ಲಿ ಯಾವುದು ಉತ್ತಮ? ಸೂಕ್ತ ಸ್ಥಳ ಆಯ್ಕೆಗಾಗಿ ಆರು ವರ್ಷಗಳ ಹಿಂದೆಯೇ ನೂರು ಬಾಹ್ಯಾಕಾಶ ವಿಜ್ಞಾನಿಗಳನ್ನು ಒಟ್ಟಾಗಿಸಿ ಸರಣಿ ಕಾರ್ಯಾಗಾರಗಳಲ್ಲಿ ಚರ್ಚೆ ನಡೆಯಿತು. ಉಪಗ್ರಹ ಚಿತ್ರಗಳನ್ನು ಆಧರಿಸಿ, ಸಂಚಾರಿ ವಾಹನದ ಸುರಕ್ಷೆಯ ದೃಷ್ಟಿಯಿಂದ ಆರಿಸಿದ ಮೂವತ್ತು ಸ್ಥಳಗಳಲ್ಲಿ ಅಂತಿಮವಾಗಿ ನಾಲ್ಕನ್ನು ವಿಜ್ಞಾನಿಗಳು ಹೆಸರಿಸಿದರು. ನೌಕೆಯ ಉಡಾವಣೆಯ ಕೆಲವೇ ತಿಂಗಳ ಮೊದಲು ಅತ್ಯಧಿಕ ವೈಜ್ಞಾನಿಕ ಮಾಹಿತಿಗಳನ್ನು ಹೊಂದಿರಬಹುದಾದ ಗೇಲ್ ಕುಳಿಯೇ ಕ್ಯೂರಿಯಾಸಿಟಿ ಲ್ಯಾಂಡಿಗಿಗೆ ಪ್ರಶಸ್ತ ಸ್ಥಳ ಎಂದು ನಿರ್ಧರಿಸಲಾಯಿತು.
ಕ್ಯೂರಿಯಾಸಿಟಿ ಶಾರ್ಪ್ಬೆಟ್ಟದ ವಿವಿಧ ಸ್ತರಗಳನ್ನು ಚಪ್ಪಟೆಯಾಗಿರುವ ಸ್ಥಳದಲ್ಲಿ ಹತ್ತಿ, ಅಲ್ಲಿನ ಮಣ್ಣು, ಕಲ್ಲುಗಳ ವಿಶ್ಲೇಷಣೆ ನಡೆಸಲಿದೆ. ದಿನವೊಂದಕ್ಕೆ ಸುಮಾರು 650 ಮೀಟರ್ ದೂರವನ್ನು ಕ್ರಮಿಸುವ ಈ ಸಂಚಾರಿ 25 ಇಂಚು ಎತ್ತರದ ದಿಬ್ಬವನ್ನು ಹತ್ತಬಲ್ಲದು.
ಸರೋಜ ಪ್ರಕಾಶ್