ಹಿಂದೆ ಗುರುಕುಲ ಪದ್ದತಿಯಿದ್ದಾಗಲೂ ಪರೀಕ್ಷೆಗಳಿದ್ದವು. ಉತ್ತೀರ್ಣ – ಅನುತ್ತೀರ್ಣ ಎಂಬುದು ಇತ್ತು. ಪರೀಕ್ಷೆ ಎಂಬ ನಿಕಶವಿರದೆ ವ್ಯಕ್ತಿಯ ಸಾಮಥ್ರ್ಯವನ್ನು ಅಳೆಯುವುದು ಅಸಾಧ್ಯ. ಒಬ್ಬರಿಂದ ಇನ್ನೊಬ್ಬರು ಹೆಚ್ಚು – ಕಡಿಮೆ ಎಂಬ ತೀರ್ಮಾನಕ್ಕೆ ಬರಲು ಪರೀಕ್ಷೆ ಎಂಬ ವ್ಯವಸ್ಥೆ ಅಗತ್ಯ. ಆದರೆ ಗುರುಕುಲ ಮಾದರಿಯಲ್ಲಿ ವಿದ್ಯಾರ್ಥಿಯ ಸಾಮಥ್ರ್ಯದ ಪರೀಕ್ಷೆ ಗುರು – ಹಿರಿಯರ ಮತ್ತು ಸಹಪಾಠಿಗಳ ಸಮ್ಮುಖದಲ್ಲೇ ಜರುಗುತ್ತಿತ್ತು. ಎಲ್ಲ ತೆರೆದಿಟ್ಟ ಪುಸ್ತಕದಂತೆ ಯಾರೂ ಬೇಕಾದರೂ ನೋಡಬಹುದಿತ್ತು, ಕೇಳಬಹುದಿತ್ತು. ಹಾಗಾಗಿ ಅಲ್ಲಿ ನಕಲು ಮಾಡಲಾಗಲೀ, ಅಂಕಗಳನ್ನು ತಿದ್ದಲಾಗಲೀ ಸಾಧ್ಯವಿರಲಿಲ್ಲ. ಹಾಗೇ ಸಿದ್ದ ಪ್ರಶ್ನೆ ಪತ್ರಿಕೆಗಳು ಬಯಲಾಗುವ ಭಯವಿರಲಿಲ್ಲ, ಬೇರೆ ಉತ್ತರ ಪತ್ರಿಕೆಗಳನ್ನು ಜೋಡಿಸುವ ವಾಮ ಮಾರ್ಗಕ್ಕೆ ಆಸ್ಪದವಿರಲಿಲ್ಲ. ಆದ್ದರಿಂದ ವ್ಯಕ್ತಿಯ ಸಾಮಥ್ರ್ಯದ ಕುರಿತು – ಪರೀಕ್ಷಾನಂತರ ಅಪಸ್ವರಗಳೂ ಹುಟ್ಟಲು ಕಷ್ಟವಾಗಿತ್ತು.
ಪ್ರಶ್ನೆ ಪತ್ರಿಕೆಗಳ ಬಹಿರಂಗದ ಹಿಂದಿನ ಷಡ್ಯಂತ್ರವನ್ನು ಹಾಗೇ ಉತ್ತರ ಪತ್ರಿಕೆಗಳನ್ನು ಬದಲಿಸಿ – ಸೇರಿಸಿ ಮಾಡುವ ಸಂಚನ್ನು ಭೇದಿಸಿದವರಿಗೆ ನಿಜಕ್ಕೂ ಶಹಬ್ಬಾಸ್ ಎನ್ನಲೇಬೇಕು. ಇದು ಇಷ್ಟಕ್ಕೇ ಸೀಮಿತವಾಗದೆ ಸಂಬಂಧಪಟ್ಟವರೆಲ್ಲ ಶಿಕ್ಷೆಗೆ ಒಳಪಡಬೇಕು. ಯಾಕೆಂದರೆ ಇವರೆಲ್ಲ ಪ್ರಾಮಾಣಿಕ ವಿದ್ಯಾರ್ಥಿಗಳ ಬದುಕಿನೊಡನೆ ಚಲ್ಲಾಟವಾಡಿದವರು. ಅವರ ಕನಸುಗಳನ್ನು ಕಮರಿಸಿದ ಪಾಪಿಗಳು. ತಮ್ಮ ಸ್ವಾರ್ಥಕ್ಕೋಸ್ಕರ ಪ್ರಾಮಾಣಿಕರಿಗೆ ಅನ್ಯಾಯವೆಸಗಿದ ರಾಕ್ಷಸರು. ಯಾವುದೇ ಒತ್ತಡಗಳಿಗೆ ಒಳಗಾಗದೆ ಪ್ರಕರಣಗಳ ತನಿಖೆಯಾಗಿ ತಪ್ಪಿತಸ್ಥರು ತಪ್ಪಿಸಿಕೊಳ್ಳದಂತೆ ನೋಡಿಕೊಳ್ಳಬೇಕಾದದ್ದು ಇಂದಿನ ಅಗತ್ಯ.
ರವೀಂದ್ರ ಭಟ್ ಕುಳಿಬೀಡು.