Chikkaballapur: ಸರಕಾರಿ ಹಾಸ್ಟೆಲ್ ಹಾಗೂ ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘದ ರಾಜ್ಯ ಕಾರ್ಯದರ್ಶಿ ಹನುಮೇಗೌಡ ಮಾತನಾಡಿ, ಸರಕಾರ ಎಲ್ಲ ಹೊರಗುತ್ತಿಗೆ ನೌಕರರಿಗೆ ಕೋವಿಡ್ ಲಾಕ್ಡೌನ್ ಅವಧಿಯ ವೇತನವನ್ನು ನೀಡಲು ಆದೇಶ ಹೊರಡಿಸಿದ್ದರೂ, ಜಿಲ್ಲೆಯ ಹೊರಗುತ್ತಿಗೆ ನೌಕರರಿಗೆ ಇದುವರೆಗೂ ವೇತನ ನೀಡದೆ ತಾರತಮ್ಯವನ್ನು ಮಾಡುತ್ತಿದೆ ಎಂದು ಆರೋಪಿಸಿದರು.
ಸರಕಾರಿ ಹಾಸ್ಟೆಲ್ ಹಾಗೂ ವಸತಿ ಶಾಲಾ ಹೊರಗುತ್ತಿಗೆ ನೌಕರರಿಗೆ ಸೇವಾ ಭದ್ರತೆ, ಬಾಕಿ ವೇತನ ಬಿಡುಗಡೆ ಸೇರಿದಂತೆ ಇನ್ನಿತರೆ ಬೇಡಿಕೆ ಈಡೇರಿಕೆಗಾಗಿ ಆಗ್ರಹಿಸಿ ಸಿಐಟಿಯು ನೇತೃತ್ವದಲ್ಲಿ ಹೊರಗುತ್ತಿಗೆ ನೌಕರರು ಜಿಲ್ಲಾಡಳಿತ ಭವನದ ಎದುರು ಬುಧವಾರ ಪ್ರತಿಭಟಿಸಿದರು.
ಕೋವಿಡ್ ಲಾಕ್ಡೌನ್ ಸಂಕಷ್ಟಕ್ಕೆ ಸಿಲುಕಿರುವ ನೌಕರರು ಜೀವನೋಪಾಯಕ್ಕಾಗಿ ಸಾಲದ ಸುಳಿಯಲ್ಲಿ ಸಿಲುಕಿ ಸಂಕಷ್ಟ ಎದುರಿಸುತ್ತಿದ್ದಾರೆ. ಹೀಗಾಗಿ ಸರಕಾರ ಕೂಡಲೇ ಎಲ್ಲ ಹೊರಗುತ್ತಿಗೆ ನೌಕರರಿಗೆ ಲಾಕ್ಡೌನ್ ಅವಧಿಯ ವೇತನವನ್ನು ಕೂಡಲೇ ಪಾವತಿಸಬೇಕು ಎಂದು ಒತ್ತಾಯಿಸಿದರು.
ಕಾರ್ಮಿಕ ವಿರೋಧಿ ತಿದ್ದುಗಳನ್ನು ರದ್ದುಗೊಳಿಸಬೇಕು, ೨೫ ಸಾವಿರ ವೇತನ ನಿಗಧಿ, ಕೋವಿಡ್ ರಜಾ ದಿನಗಳ ವೇತನ ಹಾಗೂ ಆಹಾರ ಸಾಮಗ್ರಿ ಕಿಟ್ ವಿತರಣೆ, ಬಿಡುಗಡೆ, ನೌಕರರಿಗೆ ನಿವೃತ್ತಿಯವರೆಗೆ ಸೂಕ್ತ ಭದ್ರತೆ ಒದಗಿಸುವುದು, ಸಂಪೂರ್ಣ ವೇತನವನ್ನು ಖಾತೆಗೆ ಜಮಾಯಿಸುವುದು, ಪಿಎಫ್-ಇಎಸ್ಐ ಕಾರ್ಡ್ನಲ್ಲಿನ ಲೋಪ ಸರಿಪಡಿಸುವುದು ಸೇರಿದಂತೆ ಹಲವು ಬೇಡಿಕೆ ಈಡೇರಿಕೆಗೆ ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಸರಕಾರಿ ಹಾಸ್ಟೆಲ್ ಹಾಗೂ ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘದ ಜಿಲ್ಲಾಧ್ಯಕ್ಷ ಆಂಜನೇಯರೆಡ್ಡಿ, ಸಿಐಟಿಯು ಜಿಲ್ಲಾಕಾರ್ಯದರ್ಶಿ ಜಿ.ಸಿದ್ದಗಂಗಪ್ಪ, ಕೆಪಿಆರ್ಎಸ್ ಜಿಲ್ಲಾಧ್ಯಕ್ಷ ಬಿ.ಮುನಿಕೃಷ್ಣಪ್ಪ, ಮುನಿಯಪ್ಪ, ಪುಷ್ಪ, ಕದಿರಪ್ಪ, ಸುಮಿತ್ರಮ್ಮ, ನಾರಾಯಣಪ್ಪ, ಚಂದ್ರಪ್ಪ, ವಿಮಲಮ್ಮ, ಮಂಜುಳಮ್ಮ ಇತರರು ಉಪಸ್ಥಿತರಿದ್ದರು.
- Advertisement -
- Advertisement -
- Advertisement -
- Advertisement -